ದಾವಣಗೆರೆ: ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ಅಪ್ಪು ನಟನೆ ಮಾಡಲ್ಲ ಎಂದು ಹಠಮಾಡಿದ್ರು ಎಂದು ಹಿರಿಯ ನಟ ಹೊನ್ನಾವಳ್ಳಿ ಕೃಷ್ಣ ಹಳೇಯ ನೆನಪು ಮೆಲುಕು ಹಾಕಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಪಟ್ಟಣದಲ್ಲಿ ಅಪ್ಪುವಿಗೆ ಶ್ರದ್ಧಾಂಜಲಿ ಹಾಗೂ ನೇತ್ರದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ನಾನು ಓದಿದ್ದು 4ನೇ ತರಗತಿ ಮಾತ್ರ. ಅದ್ರೂ ಸಿನಿಮಾದಲ್ಲಿ ನಟಿಸಲು ಹೋದವನಲ್ಲ. ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮೊದಲು ನಾನು ಅಪ್ಪುನನ್ನು ನೋಡಿದ್ದೆ. ಸನಾದಿ ಅಪ್ಪಣ್ಣ, ವಸಂತ ಗೀತೆ, ಮೊದಲಾದ ಚಿತ್ರಗಳಲ್ಲಿ ಅವನ ಜೊತೆಗಿದ್ದೆ. ಬೆಟ್ಟದ ಹೂ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಅಪ್ಪು ನಟನೆ ಮಾಡಲ್ಲ ಎಂದು ಹಠ ಹಿಡಿದಿದ್ರು ಎಂದು ನೆನಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ
ಅಪ್ಪು ಹಠಮಾಡಿದ್ದಕ್ಕೆ ಪಾರ್ವತಮ್ಮ ಅವರು ನನಗೆ ಕರೆ ಮಾಡಿ ನನ್ನನ್ನು ಚಿತ್ರೀಕರಣದ ಸ್ಪಾಟ್ಗೆ ಕರೆದ್ರು. ನೀನು ಇಲ್ಲದೇ ಪುನೀತ್ ನಟನೆ ಮಾಡಲು ಒಪ್ಪುತ್ತಿಲ್ಲ ಎಂದು ಹೇಳಿದರು. ಅದಕ್ಕೆ ನಾನು ಕಷ್ಟಪಟ್ಟು ಚಿತ್ರೀಕರಣದ ಸ್ಥಳಕ್ಕೆ ತಲುಪಿದೆ. ಅದು ಅಲ್ಲದೇ ಅವರಿಗೆ ನಾನು ನಟನೆ ಮಾಡಿ ತೋರಿಸಿ ಕೊಡಬೇಕಿತ್ತು. ನಾನು ನಟನೆ ಮಾಡಿ ತೋರಿಸಿದಂತೆ ಅಪ್ಪು ನಟನೆ ಮಾಡುತ್ತಿದ್ದರು ಎಂದು ಹಳೇಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.
ಭಕ್ತ ಪ್ರಹ್ಲಾದ ಚಿತ್ರೀಕರಣದಲ್ಲಿ ಮೈಮೇಲೆ ಹಾವು ಹಾಕಿಕೊಂಡು ನಟಿಸುವ, ಆನೆಗಳ ಸಾಗಿ ಬರುವ ದಾರಿಯಲ್ಲಿ ಮಲಗುವ ದೃಶ್ಯವನ್ನು ನಾನು ಮಾಡಿ ತೋರಿಸಿದ್ದೆ. ಡಾ.ರಾಜಕುಮಾರ್ ಅವರ ಹಿರಣ್ಯಕಶಿಪು ರೌದ್ರ ನರ್ತನಕ್ಕೆ ಪುನೀತ್ ಹೆದರಿದ್ದರು. ನಂತರ ರಾಜ್ ಕುಮಾರ್, ಇದು ಕೇವಲ ನಟನೆ ಮಾತ್ರ ಎಂದು ಅಪ್ಪುಗೆ ಸಮಾಧಾನ ಪಡಿದ್ರು. ಪುನೀತ್ ನಮ್ಮ ಮಧ್ಯೆ ಇಲ್ಲ ಎಂಬುದನ್ನೂ ಈಗಲೂ ನನಗೆ ನಂಬಲು ಆಗುತ್ತಿಲ್ಲ. ನಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಒಳ್ಳೆಯ ಕೆಲಸ ಮಾಡಿದ್ರೆ ಬದುಕು ಸುಂದರವಾಗುತ್ತದೆ ಎಂದು ಅಪ್ಪುನನ್ನು ಉದಾಹರಣೆಗೆ ತೆಗೆದುಕೊಂಡರು. ಇದನ್ನೂ ಓದಿ: ಕಾವೇರಿ ನದಿಗೆ ತರ್ಪಣ ಬಿಟ್ಟ ವಿನೋದ್ ರಾಜ್
ಎಲ್ಲಿವರೆಗೂ ಭಯವಿರುತ್ತೋ, ಅಲ್ಲಿವರೆಗೆ ಜಯವಿರುತ್ತದೆ. ನನ್ನ ಮನಸ್ಸಿಗೆ ಸುಳ್ಳು ಹೇಳಬಾರದು ಎಂಬ ಭಯವಿದ್ದರೆ ಯಶಸ್ಸು ಖಂಡಿತ. ಈ ಗುಣಗಳಿಂದಲೇ ಪುನೀತ್ ಪವರ್ ಸ್ಟಾರ್ ಅಗಿ ಬೆಳೆದ್ರು ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿ ನೋವು ವ್ಯಕ್ತಪಡಿಸಿದರು.