ದಾವಣಗೆರೆ: ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಾದ ಕಾರಣ ಹೊನ್ನಾಳಿಯಲ್ಲಿಯೂ ಸಹ ಪ್ರವಾಹ ಭೀತಿ ಉಂಟಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ಕಾಪಾಡಲು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರೇ ಅಖಾಡಕ್ಕಿಳಿದ್ದಿದ್ದು, ಸಂತ್ರಸ್ತರ ಮೆನೆಗೆ ತೆರಳಿ ಜನರನ್ನು ಹೊರಗೆ ಕರೆ ತರುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ನೀರಿಗೆ ಇಳಿದು ಜನರನ್ನು ಸ್ಥಳಾಂತರ ಮಾಡಿಸುತ್ತಿದ್ದಾರೆ. ತುಂಗಾಭದರ್ರಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ಹೊನ್ನಾಳಿಯ ಬಾಲ್ ರಾಜ್ ಘಾಟ್, ಬಂಬುಬಜಾರ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪ್ರವಾಹ ಇನ್ನು ಹೆಚ್ಚಾಗುವ ಹಿನ್ನಲೆ ಅಧಿಕಾರಿಗಳು ಮನೆಗಳನ್ನು ಖಾಲಿ ಮಾಡಿಸುತ್ತಿದ್ದಾರೆ.
ಅಧಿಕಾರಿಗಳ ಜೊತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹ ಕಾರ್ಯಕರ್ತರೊಂದಿಗೆ ನೀರಿಗೆ ಇಳಿದು ಜನರನ್ನು ಮನೆಯಿಂದ ಹೊರಗೆ ಕರೆ ತರುತ್ತಿದ್ದಾರೆ. ತಕ್ಷಣ ಮನೆ ಖಾಲಿ ಮಾಡಿ ಎಂದು ಸೂಚನೆ ನೀಡುತ್ತಿದ್ದಾರೆ. ರೇಣುಕಾಚಾರ್ಯ ಜೊತೆ ಕಾರ್ಯಕರ್ತರು ಸಹ ಸಾಥ್ ನೀಡಿದ್ದಾರೆ. ಶಿಂಗಟಾಲೂರು ಏತ ನೀರಾವರಿ ಬ್ಯಾರೇಜ್ನಿಂದ 1.80 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿದ್ದರಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.
ಕುರವತ್ತಿ, ಹರವಿ, ಅಲ್ಲಿಪುರ, ಮಾಗಳ, ಅಂಗೂರು, ಗ್ರಾಮದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕುರವತ್ತಿ ಗ್ರಾಮದಲ್ಲಿ 5 ಕುಟುಂಬಗಳನ್ನು ಈಗಾಗಿಲೇ ಸ್ಥಳಾಂತರಿಸಲಾಗಿದ್ದು, ಉಳಿದ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಡಗಲಿ ತಾಲೂಕಿನಲ್ಲಿ ಒಟ್ಟು 127 ಮನೆಗಳು ನೆಲಸಮವಾಗಿದೆ.