ಬೆಳಗಾವಿ: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು. ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಅವರು ದುಡುಕುವವರಲ್ಲ, ಕಾಂಗ್ರೆಸ್ (Congress) ಸಹವಾಸದಿಂದಾಗಿ ಅವರು ಈ ರೀತಿಯಾಗಿ ಮಾತನಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು (Basavaraj Bommai) ಹೇಳಿಕೆ ನೀಡಿದರು.
ಹಿಂದೂ (Hindu) ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆಯನ್ನು ಹಿಂಪಡೆದು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಜಾರಕಿಹೊಳಿ ಮಾತನಾಡುವುದು ಅಷ್ಟೇ ಅಲ್ಲ, ಸಮರ್ಥನೆ ಮಾಡುವ ಸಾಹಸ ಮಾಡಿದ್ದಾರೆ. ಈಗ ವಿಷಾದ ವ್ಯಕ್ತಪಡಿಸಿದ್ದೀನಿ ಅನ್ನೋದು ಎಷ್ಟರ ಮಟ್ಟಿಗೆ ಸರಿ, ತಪ್ಪು ಎನ್ನುವುದನ್ನು ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ. ನನಗೆ ಆಶ್ಚರ್ಯ ಆಗಿರುವಂತದ್ದು ಸತೀಶ್ ಜಾರಕಿಹೊಳಿ ದುಡುಕುವವರಲ್ಲ. ಕಾಂಗ್ರೆಸ್ ಸಹವಾಸದಿಂದ, ಕಾಂಗ್ರೆಸ್ನ ಸಂಸ್ಕೃತಿ ಪ್ರಭಾವದಿಂದ ಹೀಗಾಗಿದೆ ಎಂದರು.
ಕಾಂಗ್ರೆಸ್ ಸಂಸ್ಕೃತಿಯೇ ಯಾವಾಗಲೂ ವಿಭಜಿಸುವ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮದ ದೇವಾಲಯಕ್ಕೆ ಹೋಗುವುದು, ಟೆಂಪಲ್ ರನ್ ಮಾಡುವಂತದ್ದು ಸಹಜವಾಗಿ ಅವರು ಎಲ್ಲವನ್ನೂ ವೋಟ್ಬ್ಯಾಂಕ್ ಸಲುವಾಗಿ ಮಾಡುತ್ತಾರೆ. ಅಲ್ಪಸಂಖ್ಯಾತರ ತುಷ್ಠಿಕರಣದ ಜೊತೆಗೆ ವಕ್ಫ್ ಪ್ರಾಪಾರ್ಟಿಯನ್ನು ಮುಚ್ಚಿದ್ದಾರೆ. ಅಧಿಕಾರಕ್ಕಾಗಿ ಹಿಂದೂಗಳನ್ನು ದ್ವೇಷಿಸುವುದು, ದೂಷಿಸುವುದು ಮಾಡುತ್ತಿದ್ದಾರೆ. ದೇಶದ ಅಭಿಮಾನ ಆಗಲಿ, ಪ್ರೀತಿ ಆಗಲಿ ಎಳ್ಳಷ್ಟೂ ಇಲ್ಲ. ಹೀಗಾಗಿ ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಮಾಡುವ ಕೆಟ್ಟ ಕೆಲಸಗಳು ನಿಲ್ಲಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಕಳುಹಿಸಿರುವ ಪತ್ರದಲ್ಲಿ ಏನಿದೆ ನೋಡುತ್ತೇನೆ. ತನಿಖೆ ಮಾಡುವುದಕ್ಕೆ ಏನಿದೆ? ಅವರು ಯಾವ ಆಧಾರದ ಮೇಲೆ ಇದನ್ನು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಅದರ ದೃಢೀಕರಣ ಆಧರಿಸಿ ಅದರ ಸತ್ಯಾಸತ್ಯತೆಯನ್ನು ಹೊರಗೆ ತರಬಹುದು. ಈಗ ಹತ್ತು ಹಲವಾರು ಸಾಹಿತ್ಯ, ವಿಕೃತ ಸಾಹಿತ್ಯ ಬರುತ್ತವೆ. ನಂಬಲಾರದ ಸಾಹಿತ್ಯಗಳು, ವೀಡಿಯೋಗಳು ಬರುತ್ತಿರುತ್ತವೆ. ಸಾಮಾಜಿಕ ಜಾಲತಾಣ ಮತ್ತು ಪುಸ್ತಕ ರೂಪದಲ್ಲಿವೆ. ಡಿಕ್ಷನರಿ ನೋಡಿ ಮಾತನಾಡಿದೆ ಎನ್ನುತ್ತಾರೆ. ಆ ಡಿಕ್ಷನರಿ ಯಾವುದು? ಅದರ ಅರ್ಹತೆ ಏನು? ಎಂಬುದು ಬಹಿರಂಗವಾಗಬೇಕು ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ವಿದೇಶಿ ತಳಿ, ಜಾರಕಿಹೊಳಿಯನ್ನು ಉಚ್ಛಾಟಿಸಿ: ಯತ್ನಾಳ್