ಉಡುಪಿ: ಹಿಜಬ್ ವಿವಾದಕ್ಕೆ ಸಂಬಂಧಿಸಿ ವಿದೇಶಗಳಿಂದ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗೃಹ ಸಚಿವರಿಗೆ ಶಾಸಕ ರಘುಪತಿ ಭಟ್ ಅವರು ಮೌಖಿಕವಾಗಿ ಮಾಹಿತಿ ನೀಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಬ್ಬಿ ಸೌಂಡ್ಗೆ ನಾನು ಹೆದರಲ್ಲ. ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಉಡುಪಿ ಜಿಲ್ಲೆಯ ಮುಸಲ್ಮಾನರಿಂದ ಒಂದೂ ಪ್ರತಿರೋಧ ಬಂದಿಲ್ಲ. ಉಡುಪಿ ಹಾಗೂ ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ಬಾಲ್ಯದಿಂದಲೇ ಇಂಥ ಹಲವು ಬೆದರಿಕೆಗಳು ನಾನು ನೋಡಿದ್ದೇನೆ. ಉಡುಪಿಯ ಮುಸ್ಲಿಂ ಒಕ್ಕೂಟ, ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಘಟನೆ ಕುರಿತು ಉಡುಪಿ ಎಸ್ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ. ನನಗೆ ಭದ್ರತೆ ಬೇಡ, ನನಗೆ ದೇವರಿದ್ದಾರೆ ಅವರೇ ನನ್ನ ಭದ್ರತೆ ನೋಡಿಕೊಳ್ಳುತ್ತಾರೆ. ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್. ಉಡುಪಿಯ ಯಾವುದೇ ಒಬ್ಬ ವ್ಯಕ್ತಿ, ಒಂದು ಸಂಘಟನೆಯಿಂದ ಬೆದರಿಕೆ ಬಂದಿಲ್ಲ. ಹೈದರಾಬಾದ್ನಿಂದ ಫೋನ್ ಕರೆ ಮಾಡಿ ಒಬ್ಬ ಹುಚ್ಚ ಮಾತನಾಡಿದ್ದಾನೆ. ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
ಹಿಜಬ್ ಹಿನ್ನೆಲೆಯಲ್ಲಿ ಇಂಟರ್ನೆಟ್ ಕಾಲ್ ಮೂಲಕ ಬೆದರಿಸುತ್ತಿದ್ದಾರೆ. ಹೈದರಾಬಾದ್ನಿಂದ ಫೋನ್ ವಾಟ್ಸಪ್, ಫೇಸ್ಬುಕ್ ಮೂಲಕ ಥ್ರೆಟ್ ಹಾಕುತ್ತಿದ್ದಾರೆ. ಆದರೆ ನಾನು ಯೂನಿಫಾರ್ಮ್ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಚರ್ಚೆ ಮಾಡಿಲ್ಲ ಮಾತನಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್
ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ಮನೆಗೆ ಭದ್ರತೆ ನೀಡಲಾಗುದ್ದು, ಗನ್ ಮ್ಯಾನ್ ಭದ್ರತೆಯನ್ನು ಪೊಲೀಸ್ ಇಲಾಖೆ ಒದಗಿಸಿದೆ.