ರಾಯಚೂರು: ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಸಂಕ್ರಾಂತಿ ಹಬ್ಬಕ್ಕೆ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸುವ ಮೂಲಕ ಸಿಹಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ವಾಸ್ತವವಾಗಿ ಸಚಿವರು ಅನ್ಯಾಯ ಮಾಡಿದ್ದಾರೆ ಎಂದು ರಾಯಚೂರಿನಲ್ಲಿ ಅತಿಥಿ ಉಪನ್ಯಾಸಕರು ಕಿಡಿಕಾರಿದ್ದಾರೆ.
ಸೇವಾ ಭದ್ರತೆಗಾಗಿ ಕಳೆದ ಡಿಸೆಂಬರ್ 10 ರಿಂದ ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಒಟ್ಟು 14,500 ಅತಿಥಿ ಉಪನ್ಯಾಸಕರಿದ್ದು, 430 ಪದವಿ ಕಾಲೇಜುಗಳಲ್ಲಿ ನಾಲ್ಕು ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಾವು ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ಉನ್ನತ ಶಿಕ್ಷಣ ಸಚಿವರು 7,500 ಅತಿಥಿ ಉಪನ್ಯಾಸಕರನ್ನು ತೆಗೆದುಹಾಕಿದ್ದಾರೆ. 8 ಗಂಟೆ ಪಾಠ ಮಾಡುವ ನಮಗೆ ಹೆಚ್ಚುವರಿಯಾಗಿ 15 ಗಂಟೆ ಪಾಠ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಹೀಗಾಗಿ ವೇತನ ಹೆಚ್ಚಿಸಿದ್ದಾರೆಯೇ ವಿನಃ ಯಾವುದೇ ಸಿಹಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಳ್ಳು ಹೇಳುವ ಮೂಲಕ ಸಚಿವ ಅಶ್ವಥ್ ನಾರಾಯಣ್ ಅವರು ವಂಚಿಸಿದ್ದಾರೆ. ತಮಗೆ ಸೇವಾ ಭದ್ರತೆ ಒದಗಿಸದ ಹೊರತು ತಮ್ಮ ಹೋರಾಟ ನಿಲ್ಲಿಸುವುದಿಲ್ಲ. ಮೂರ್ನಾಲ್ಕು ದಿನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಿ, ಸಿಎಂ ನಿವಾಸದ ಮುಂದೆ ಪ್ರತಿಭಟನೆ ಮಾಡುವುದಾಗಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್