ಚಾಮರಾಜನಗರ: ಹೈಕಮಾಂಡ್ ಡಿ.6 ತನಕ ಏನು ಮಾತನಾಡಬೇಡ ಎಂದು ಹೇಳಿದೆ. ಅಲ್ಲಿಯವರೆಗೂ ಕೂಡ ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೇಳಿದ್ದಾರೆ.
ಚಾಮರಾಜನಗರದಲ್ಲಿ (Chamarajanagar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸೇರ್ಪಡೆ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ಗೆ ಹೋಗುವ ವಿಚಾರ ನನ್ನ ತಲೆಯಲ್ಲಿ ಇಲ್ಲ. ನನ್ನ ಕೋಳಿಯಿಂದಲೇ ಬೆಳಕಾಗೋದು ಅಂತ ಕೆಲವರು ಎಂದುಕೊಂಡಿದ್ದಾರೆ. ಅದೆಲ್ಲ ನಡಿಯಲ್ಲ, ಮುದುಕಿ ಯಾರು? ಕೋಳಿ ಯಾರು? ಅನ್ನೋದನ್ನ ನೀವೇ ತೀರ್ಮಾನಿಸಿ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ- CBIಗೆ ವಹಿಸಿದ್ದ ಕೇಸ್ ಹಿಂಪಡೆಯಲು ಸಂಪುಟ ಸಮ್ಮತಿ
ಇನ್ನೂ 64 ವಿದ್ಯೆಯಲ್ಲಿ 62 ವಿದ್ಯೆ ಗೊತ್ತು ಎಂಬ ಮದುವೆ ವಿಚಾರದ ಕಥೆ ಹೇಳಿ, ಪರೋಕ್ಷವಾಗಿ ವಿಜಯೇಂದ್ರ (B.Y Vijayendra) ಅವರಿಗೆ ಟಾಂಗ್ ಕೊಟ್ಟಿದ್ದಾರೆ. 64 ವಿದ್ಯೆಯಲ್ಲಿ 62 ವಿದ್ಯೆಯಷ್ಟೆ ಅವರಿಗೆ ಗೊತ್ತಿದೆ. ಅವರಿಗೆ ಸ್ವಂತ ಬುದ್ದಿ ಇಲ್ಲ. ಬೇರೆ ಯಾರು ಹೇಳೋದನ್ನು ಕೇಳಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೆಬೆಲ್ ನಾಯಕರಾದ ಬೆಲ್ಲದ್, ಲಿಂಬಾವಳಿ, ಯತ್ನಾಳ್ ಹೇಳಿಕೆಗಳನ್ನು ಸಮರ್ಥಿಸಿಕೊಂಡರು. ಇವತ್ತಿನ ಪರಿಸ್ಥಿತಿ ಸೋಮನಹಳ್ಳಿ ಮುದುಕಿ ಕಥೆಯಾಗಿದೆ. ಅದನ್ನು ಡಿ.6 ತನಕ ಹೇಗೆ ಬಗೆ ಹರಿಸುತ್ತಾರೆ ಕಾದು ನೋಡೋಣವೆಂದು ಹೇಳಿದ್ದಾರೆ.
ನನ್ನ ಜೀವನದಲ್ಲಿ ಯಾರನ್ನೂ ಭೇಟಿ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ಇನ್ನೊಬ್ಬರ ಬಳಿ ಹೋಗಿ ಹಲ್ಲು ಕಿಸಿದು, ನನ್ನನ್ನು ಪಾರ್ಟಿಗೆ ಸೇರಿಸಿಕೊಳ್ಳಿ ಎಂದು ಹೇಳುವುದಿಲ್ಲ. ನನಗೆ ಆ ಗತಿ ಬಂದಿಲ್ಲ. ನಾನು ಬೆಳೆದಿರುವುದು ಜೆ.ಎಚ್.ಪಟೇಲ್, ದೇವೇಗೌಡ, ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ. ನಾನು ಸ್ವಾಭಿಮಾನ, ಸಂಸ್ಕಾರ ಇಟ್ಟುಕೊಂಡು ಬದುಕುತ್ತಿದ್ದೇನೆ ಎಂದಿದ್ದಾರೆ.
ಸಚಿವ ರಾಜಣ್ಣ ಅವರಿಗೆ ಕರೆ ಮಾಡಿದ ವಿಚಾರವಾಗಿ, ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಕರೆ ಮಾಡಿದ್ದೆ. ನಾನೇನು ಶಕ್ತಿ ಪ್ರದರ್ಶನಕ್ಕೆ ಮಠವನ್ನು ಬಳಸಿಕೊಳ್ಳುವುದಿಲ್ಲ. ಅಷ್ಟೊಂದು ಕಿರಾತಕ ನಾನಲ್ಲ. ನಮ್ಮ ಕುಟುಂಬದಿಂದ ಗುರು ಭವನ ಕಟ್ಟಿದ್ದೇವೆ. ಆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರು ಬರುತ್ತಾರೆ. ಅದೇ ರೀತಿ ಆ ಜಿಲ್ಲೆಯ ಇಬ್ಬರು ಸಚಿವರನ್ನು ಆಹ್ವಾನ ಮಾಡಿದ್ದೇನೆ ಎಂದಿದ್ದಾರೆ.
ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕೇಳಿದ್ದೆ. ಆ ವಿಚಾರ ಏನಾಗಿದೆ ಎಂದು ಡಿ.6 ರಂದು ಹೇಳುತ್ತೇನೆ. ಯಡಿಯೂರಪ್ಪ ಅವರು ಸಂಪರ್ಕ ಮಾಡಿದ್ದರಾ? ಎಂಬ ಪತ್ರ ಕರ್ತರ ಪ್ರಶ್ನೆಗೆ, ಯಡಿಯೂರಪ್ಪನೂ ಇಲ್ಲ, ತಿಮ್ಮಪ್ಪ, ಯಾವ ಬೊಮ್ಮಪ್ಪ, ನನಗೆ ಯಾರೂ ಕರೆ ಮಾಡಿಲ್ಲ. ನಾನು ಯಾರನ್ನೂ ಸಂಪರ್ಕ ಮಾಡುವ ಪರಿಸ್ಥಿತಿಯಲ್ಲಿಯೂ ಇಲ್ಲ. ಲೋಕಸಭೆ ಸ್ಪರ್ಧೆ ಕುರಿತು ನಾನು ಕಂಟೆಂಡರೂ ಅಲ್ಲ, ಕಾಂಪಿಟೇಟರೂ ಅಲ್ಲ. ಯಾರನ್ನೂ ಕೂಡ ನನ್ನ ಜೊತೆ ಹೋಲಿಕೆ ಮಾಡಬೇಡಿ. ನೀವು ನೋಡಿದ್ದೀರಾ ಏನೇನು ಹಲ್ಕಾ ಕೆಲ್ಸ ಆಯ್ತು ಎಂದು ನಿಮಗೆ ಗೊತ್ತಿದೆ. ನನಗೆ ನನ್ನದೇ ಆದ ದುಡಿಮೆ ಇದೆ. ಶ್ರಮ ಇದೆ. ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು. ನನ್ನ ಅಂತರಾಳದ ನೋವನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲೆಲ್ಲಿ ತಪ್ಪಾಗಿದೆ ಎನ್ನುವ ಮಾಹಿತಿಯನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಡಿ.6 ರಂದು ಎಲ್ಲವನ್ನೂ ಕೂಡ ವಿವರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!