ರಾಯಚೂರು: ಜಿಲ್ಲೆಯಲ್ಲಿ ಅಪರೂಪದ ಖನಿಜ ನಿಕ್ಷೇಪಗಳ ಪತ್ತೆಗೆ ಕೇಂದ್ರದ ಭೂ ಭೌತಶಾಸ್ತ್ರ ಇಲಾಖೆಯಿಂದ ಹೆಲಿಬೋನ್ ಸಮೀಕ್ಷೆ ನಡೆಸಲಾಗುತ್ತಿದೆ. ನಗರದ ಹೊರವಲಯದ ಮಲಿಯಾಬಾದ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ.
ಕೇಂದ್ರದ ಭೂ ಭೌತಶಾಸ್ತ್ರ ಇಲಾಖೆಯಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಪ್ಲಾಟಿನಂ, ಮಾಲಿಬ್ಡಿನಮ್, ಚಿನ್ನ, ಯುರೇನಿಯಂ ಸೇರಿ ಇತರ ಅಪರೂಪದ ಖನಿಜಗಳ ಪತ್ತೆಗೆ ಶೋಧ ನಡೆದಿದೆ. ಟೈಮ್ ಡೊಮೇನ್ ಎಲೆಕ್ಟ್ರೋಮ್ಯಾಗ್ನೆಟಿಕ್ ಹಾಗೂ ಮ್ಯಾಗ್ನೆಟಿಕ್ ಭೂಭೌತಿಕ ಸಮೀಕ್ಷೆಯನ್ನು ಫೆ.10ರಿಂದ ಏ.30ರವರೆಗೆ ವಿವಿಧೆಡೆ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ, ಕರ್ನಾಟಕದ ವಿವಿಧ ಭಾಗಗಳಲ್ಲಿ ಹೊರಗುತ್ತಿಗೆ ಏಜೆನ್ಸಿ ಮೂಲಕ ಸಮೀಕ್ಷೆ ನಡೆದಿದ್ದು, ಬೆಂಗಳೂರಿನ ಭೌಗೋಳಿಕ ಸಮೀಕ್ಷಾ ಇಲಾಖೆಯ ದೂರ ಸಂವೇದಿ ಹಾಗೂ ವಾಯು ಸಮೀಕ್ಷಾ ವಿಭಾಗದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ: ಹಿಂದೂ ಯುವಕರ ಮೇಲೆ ಅನ್ಯಕೋಮಿನವರಿಂದ ಹಲ್ಲೆ ಪ್ರಕರಣ – ಎಲ್ಲಾ ಆರೋಪಿಗಳ ಬಂಧನ
ಬೆ.6ರಿಂದ ಸ.6ರವರೆಗೆ ನಡೆಯುವ ಹೆಲಿಬೋನ್ ಸಮೀಕ್ಷೆಯಲ್ಲಿ ಹೆಲಿಕಾಪ್ಟರ್ಗೆ ಡ್ರೋನ್ ಮಾದರಿ ಯಂತ್ರ ಅಳವಡಿಸಿ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಭೂಮಿಯ ಮೇಲ್ಮಟ್ಟದಿಂದ 200 ರಿಂದ 1000 ಅಡಿ ಎತ್ತರದಲ್ಲಿ 40 ರಿಂದ 50 ನಾಟ್ ಮೈಲ್ ವೇಗದಲ್ಲಿ ಹಾರಾಟ ನಡೆಸಿ ಹೆಲಿಕಾಪ್ಟರ್ ಮೂಲಕ ಸರ್ವೆ ನಡೆದಿದೆ. ಹೆಲಿಕ್ಯಾಪ್ಟರ್ ಸಮೀಕ್ಷೆಯಿಂದ ಸ್ಥಳೀಯರಲ್ಲಿ ಕುತೂಹಲ ಹೆಚ್ಚಾಗುವುದರ ಜೊತೆಗೆ ಆತಂಕವೂ ಸೃಷ್ಟಿಯಾಗಿದೆ.

