ಕಾರವಾರ: ಮಳೆಯಿಂದಾಗಿ ಸೇತುವೆ ಮುರಿದ ಹಿನ್ನೆಲೆಯಲ್ಲಿ ವೃದ್ಧೆಯ ಶವವನ್ನೂ ತುಂಬಿ ಹರಿಯುತ್ತಿರುವ ನೀರಿನಲ್ಲಿ ಸಾಗಿಸಿ ಶವಸಂಸ್ಕಾರ ಮಾಡಿದ ಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಗ್ರಾಮದಲ್ಲಿ ನಡೆದಿದೆ.
ಇಂದು ಮುಂಜಾನೆ ವೃದ್ಧೆ ಸುಶೀಲ(81) ವಯೋ ಸಹಜತೆಯಿಂದ ಮೃತಪಟ್ಟಿದ್ದರು. ಇವರ ಸಂಸ್ಕಾರಕ್ಕಾಗಿ ಶವಾಗಾರಕ್ಕೆ ಕೊಂಡೊಯ್ಯಬೇಕಿತ್ತು. ಆದರೆ ಮಳೆಯಿಂದಾಗಿ ಕೇಣಿಯಿಂದ ಅಂಕೋಲಕ್ಕೆ ಸಂಪರ್ಕಿಸುವ ಕಳೆದ ಒಂದು ವರ್ಷದಲ್ಲಿ ಹೊಸದಾಗಿ ನಿರ್ಮಿಸಿದ್ದ ಸೇತುವೆ ಈ ಹಿಂದೆಯೇ ಮಳೆಯಿಂದ ಕುಸಿದು ಬಿದ್ದಿದ್ದರಿಂದಾಗಿ ಶವವನ್ನು ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳದಲ್ಲಿಯೇ ಪರದಾಡಿಕೊಂಡು ಕೊಂಡೊಯ್ದು ಅಂತ್ಯ ಅಂಸ್ಕಾರ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಸುರಿದ ಬಾಳಿ ಮಳೆಯಿಂದಾಗಿ ಮಲೆನಾಡು ಭಾಗದ ಸಿದ್ದಾಪುರ ಭಾಗದ 250 ಎಕರೆ ಕೃಷಿ ಭೂಮಿ ಪ್ರದೇಶ ನೀರಿನಿಂದ ಆವೃತವಾಗಿದೆ. ಮಳೆಯ ಪರಿಣಾಮದಿಂದಾಗಿ ಕೆರೆ, ಕೋಡಿಗಳು ತುಂಬಿ ಹೊಲಗದ್ದೆಗಳಲ್ಲಿ ನೀರು ನಿಂತಿದ್ದು, ಹೆಚ್ಚಿನ ಮಳೆಯಾದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ.
ಮಳೆಯಿಂದಾಗಿ ಭಟ್ಕಳದ ಪಟ್ಟಣಗಳಲ್ಲಿ ಪುರಸಭಾ ಆಡಳಿತ ಶುದ್ಧ ನೀರನ್ನು ಸರಬರಾಜು ಮಾಡದೇ ಅಸಡ್ಡೆ ತೋರಿದ್ದು, ಕುಡಿಯುವ ನೀರು ಸಂಪೂರ್ಣ ಮಣ್ಣು ಮಿಶ್ರಿತವಾಗಿದೆ. ಪುರಸಭೆಯ ದಿವ್ಯ ನಿರ್ಲಕ್ಷದಿಂದ ಮಳೆಗಾಲದಲ್ಲಿ ಕುಡಿಯುವ ಶುದ್ಧ ನೀರಿಲ್ಲದೇ ಜನ ಹಿಡಿ ಶಾಪಹಾಕುವಂತಾಗಿದೆ.