ಮಡಿಕೇರಿ: ಕೊಡಗಿನಲ್ಲಿ ಮತ್ತೆ ಭೀಕರ ಜಲಸ್ಫೋಟ ಉಂಟಾಗಿದೆ. ಮಡಿಕೇರಿ ತಾಲೂಕಿನ ಚೆಂಬು ಪಂಚಾಯ್ತಿ ವ್ಯಾಪ್ತಿಯ ದಬ್ಬಡ್ಕದಲ್ಲಿ ಭೀಕರ ಜಲಸ್ಫೋಟವಾಗಿದೆ.
ರಾಜೇಶ್ವರಿ ಎಂಬವರ ರಬ್ಬರ್ ತೋಟದಲ್ಲಿ ಜಲಸ್ಫೋಟವಾಗಿದ್ದು, ಪರಿಣಾಮ ಸುಮಾರು 150 ರಬ್ಬರ್ ಮರಗಳು,150 ಕಾಫಿ ಗಿಡ ಹಾಗೂ 40 ಅಡಿಕೆ ಮರಗಳು ಕೊಚ್ಚಿಹೋಗಿವೆ. ತಡರಾತ್ರಿ 12 ಗಂಟೆ ವೇಳೆಗೆ ಭಾರೀ ಶಬ್ಧದೊಂದಿಗೆ ಜಲಸ್ಫೋಟವಾಗಿದ್ದು, ಕೂಡಲೇ ಸಮುದ್ರದ ಅಲೆಯಂತೆ ನೀರು ನುಗ್ಗಿ, ಅರ್ಧ ಎಕರೆ ಭೂ ಪ್ರದೇಶ ಕುಸಿತವಾಗಿದೆ ಎಂದು ಬಾಲಕೃಷ್ಣ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಜಲಸ್ಫೋಟದ ಶಬ್ಧಕೇಳಿ ಭಯದಿಂದಲೇ ಮನೆಯಿಂದ ಹೊರಬಂದೆವು. ಹೊರ ಬರುವಷ್ಟರಲ್ಲಿ ಸಮುದ್ರದ ಅಲೆಯಂತೆ ನೀರು ನುಗ್ಗಿತು. ಕೂಡಲೇ ಎತ್ತರದ ಪ್ರದೇಶದ ಕಡೆಗೆ ಓಡಿ ಜೀವ ಉಳಿಸಿಕೊಂಡಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಮಳೆ ಎಫೆಕ್ಟ್, ದುಬಾರಿ ವಸ್ತುಗಳು ಅರ್ಧ ಬೆಲೆಗೆ ಸೇಲ್- ಮುಗಿಬಿದ್ದ ಗ್ರಾಹಕರು
ಬಾಲಕೃಷ್ಣ ಅವರ ಮನೆಗೆ ಕೆಸರು ನೀರು ನುಗ್ಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಹಾಳಾಗಿವೆ. ದನದ ಕೊಟ್ಟಿಗೆ ಕುಸಿದುಬಿದ್ದಿದೆ. ಜಲಸ್ಫೋಟದ ಜೊತೆಗೆ ಭಾರಿ ಭೂಕುಸಿತ ಕೂಡ ಉಂಟಾಗಿದ್ದು, ಅರ್ಧ ಎಕರೆ ಭೂ ಪ್ರದೇಶ ಕುಸಿತವಾಗಿದೆ. ಜೂನ್ ತಿಂಗಳ ಅಂತ್ಯದಲ್ಲಿ 10 ಕ್ಕೂ ಹೆಚ್ಚು ಬಾರಿ ಭೂಕಂಪನವಾಗಿತ್ತು. ಇದೀಗ ಜಲಸ್ಫೋಟ ಹಾಗೂ ಬೂಕುಸಿತದಿಂದಾಗಿ ಜನ ಕಂಗಾಲಾಗಿದ್ದಾರೆ.