ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದೆ. ಗುಡುಗು-ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಕೆಲವು ಕಡೆ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡಿದೆ.
ಯಾದಗಿರಿ ತಾಲೂಕಿನ ಮುದ್ನಾಳ ದೊಡ್ಡ ತಾಂಡಾದದಲ್ಲಿ ಮನೆ ಕುಸಿದು 8 ವರ್ಷದ ಬಾಲಕ ಅಭಿ ರಾಥೋಡ್ ಮೃತಪಟ್ಟಿದ್ದಾನೆ. ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್ನಲ್ಲಿ ಧಾರಾಕಾರ ಮಳೆಯಾಗಿದೆ. ಕೊಪ್ಪಳದಲ್ಲಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಕುಷ್ಟಗಿ ತಾಲೂಕಿನ ನೆರೇಬಂಚಿ ಗ್ರಾಮದ 28 ವರ್ಷದ ಲಕ್ಷ್ಮಣ ಬಿಜಕಲ್, ಬಾದಿನಾಳ ಗ್ರಾಮದ 26 ವರ್ಷದ ರೇಣುಕಾ ಪರಸಾಪೂರ ಮೃತಪಟ್ಟಿದ್ದಾರೆ. ಬಾದಿಮನಾಳ ಗ್ರಾಮದ ಶಾಂತವ್ವ ಎಂಬವರ ಸ್ಥಿತಿ ಚಿಂತಾಜನಕವಾಗಿದೆ.
ಕೊಪ್ಪಳ, ಗಂಗಾವತಿ, ಯಲಬುರ್ಗಾದಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳಗಾವಿಯ ಬಡಾಲ ಅಂಕಲಗಿಯಲ್ಲಿ ಸಿಡಿಲು ಬಡಿದು ರುದ್ರವ್ವ ಕುಡೆನಹಟ್ಟಿ ಎಂಬವರು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತೆಂಕಲಹುಂಡಿಯಲ್ಲಿ 13 ವರ್ಷದ ಬಾಲಕ ಮನು ಮೃತಪಟ್ಟಿದ್ದಾನೆ.
ಕೋಲಾರ ಹೊರವಲಯದಲ್ಲಿ ಮದುವೆಗಾಗಿ ಶಾಂತಿ ಕಲ್ಯಾಣ ಮಂಟಪಕ್ಕೆ ಮಾಡಲಾಗಿದ್ದ ಅಲಂಕಾರ ಹಾಳಾಗಿದೆ. ಮೈಸೂರು, ರಾಮನಗರ, ಚಿಕ್ಕಬಳ್ಳಾಪುರದಲ್ಲಿ ಕೂಡ ಧಾರಾಕಾರ ಮಳೆಯಾಗಿದೆ.