ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗ ನದಿಯಲ್ಲಿ ಶವಗಳು ತೇಲಿ ಬರುತ್ತಿವೆ.
ಮಳೆಯಿಂದಾಗಿ ಮಲೆನಾಡಲ್ಲಿ ಊರೂರೇ ಕೊಚ್ಚಿ ಹೋಗುತ್ತಿದ್ದು, ನೂರಾರು ಜನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ ಗ್ರಾಮಗಳು ನೀರಲ್ಲಿ ಮುಳುಗಿ ಜನ ಕಂಗಾಲಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಒಂದು ಪರಿಹಾರ ಕೇಂದ್ರವನ್ನು ತೆರೆದಿದ್ದು, ಈಗ ಅಧಿಕಾರಿಗಳನ್ನು ಅಲರ್ಟ್ ಮಾಡಬೇಕಿದೆ. ಮಳೆಯಿಂದಾಗಿ ಹೇಮಾವತಿ, ತುಂಗಾ-ಭದ್ರಾ ನದಿ ಪಾತ್ರದ ಹಲವು ಗ್ರಾಮಗಳು ಮುಳುಗಡೆ ಆಗಿದೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಅನೇಕ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಮುಗ್ರಹಳ್ಳಿ, ಕೋಳೂರು, ಬಕ್ಕಿ, ಬೆಟ್ಟಗೆರೆ, ಹಾಲೂರು, ಕಿತ್ತಲೆಗಂಡಿ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸೇರಿದಂತೆ ರಸ್ತೆಗಳು ಸಂಪೂರ್ಣ ಮುಳುಗಡೆ ಆಗಿದ್ದು, ಸಾವಿರಾರು ಮಂದಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದಾರೆ. ಸದ್ಯ ಜನರು ಜಿಲ್ಲಾಡಳಿತದ ನೆರವನ್ನು ಎದುರು ನೋಡುತ್ತಿದ್ದಾರೆ.
ಇತ್ತ ಮಹಾಮಳೆಯಿಂದಾಗಿ ಪ್ರವಾಹದ ಮಟ್ಟ ಮೀರಿ ಭದ್ರಾ ನದಿ ಹರಿಯಿತ್ತಿದೆ. ಭದ್ರಾ ನದಿ ಆರ್ಭಟಕ್ಕೆ ಖಾಂಡ್ಯ- ಬಾಳೆಗದ್ದೆ ತೂಗು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತೂಗು ಸೇತುವೆ ಕೊಚ್ಚಿ ಹೋದ ಪರಿಣಾಮ ಬಾಳೆಗದ್ದೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಭದ್ರಾ ನದಿ ದಾಟಲು ಈ ಗ್ರಾಮಕ್ಕೆ ಈ ತೂಗು ಸೇತುವೆಯೇ ಆಸರೆಯಾಗಿತ್ತು. ಆದರೆ ಈಗ ಸೇತುವೆ ಕೊಚ್ಚಿ ಹೋದ ಕಾರಣ 50ಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ಬಂದ್ ಆಗಿದೆ.