ಚಿಕ್ಕಬಳ್ಳಾಪುರ: ಅತಿ ಕಡಿಮೆ ಬೆಲೆಯಲ್ಲಿ ಕೇವಲ 5 ರೂಪಾಯಿಗೆ ತರಹೇವಾರಿ ಹಣ್ಣಿನ ಜ್ಯೂಸ್ ನೀಡುತ್ತಿದ್ದ ಅಂಗಡಿ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿನ ಮಾಲೀಕ ಕಾರ್ತಿಕ್ ಅವರು ತಮ್ಮ ನವೀನ್ ಜ್ಯೂಸ್ ಸೆಂಟರ್ ನಲ್ಲಿ 5 ರೂ.ಗೆ ಜ್ಯೂಸ್ ನೀಡುತ್ತಿದ್ದರು. ಅತಿ ಕಡಿಮೆ ಬೆಲೆಗೆ ಕಳಪೆ ಗುಣಮಟ್ಟ ಹಾಗೂ ಕೆಲ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸಲಾಗುತ್ತಿದೆ ಎಂದು ಆರೋಪಿಸಿ ಕೆಲ ನಾಗರೀಕರು ಆರೋಗ್ಯ ಇಲಾಖೆಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಜ್ಯೂಸ್ ಸೆಂಟರ್ ಮೇಲೆ ತಾಲೂಕು ಆರೋಗ್ಯಾಧಿಕಾರಿ ಮಹಿಮಾ ಸೇರಿದಂತೆ ಪಟ್ಟಣ ಪಂಚಾಯತಿಯ ಹೆಲ್ತ್ ಇನ್ಸ್ ಪೆಕ್ಟರ್ ಶಿವಣ್ಣ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಅಧಿಕಾರಿಗಳು ಜ್ಯೂಸ್ ಸೆಂಟರ್ ನಲ್ಲಿದ್ದ ಹಲವು ಪದಾರ್ಥಗಳ ಮಾದರಿಯನ್ನು ಪಡೆದು, ಜ್ಯೂಸ್ ಗೆ ಬಳಸುವ ಪದಾರ್ಥಗಳ ಗುಣಮಟ್ಟದ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿದ್ದಾರೆ. ಪ್ರಯೋಗಾಲಯದ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಾಲೂಕು ಆರೋಗ್ಯಾಧಿಕಾರಿ ಮಹಿಂ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.