ಭೋಪಾಲ್: ರಸ್ತೆ ಅಪಘಾತಕ್ಕೀಡಾಗಿ ಕಳೆದ 5 ವರ್ಷಗಳಿಂದಲೂ ಹಾಸಿಗೆ ಹಿಡಿದಿರುವ ಮಗಳ ಚಿಕಿತ್ಸೆಗೆ (Medical Treatment) ಹಣ ಒದಗಿಸಲಾಗದೇ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಧ್ಯಪ್ರದೇಶದ (Madhya Pradesh) ಸತ್ನಾದಲ್ಲಿ ನಡೆದಿದೆ.
ಏನಿದು ಘಟನೆ?
ಮಧ್ಯಪ್ರದೇಶದ ಸತ್ನಾದ ನಿವಾಸಿ ಪ್ರಮೋದ್ ಅವರ ಪುತ್ರಿ ಅನುಷ್ಕಾಗೆ 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ (Road Accident) ಬೆನ್ನುಮೂಳೆ ಮುರಿದು ಹಾಸಿಗೆ ಹಿಡಿದಿದ್ದಾರೆ. ಇದರಿಂದ ತಂದೆ ಪ್ರಮೋದ್, ಹಾಸಿಗೆ ಹಿಡಿದ ತನ್ನ ಮಗಳ ಚಿಕಿತ್ಸೆಗೆಂದು ಹಣ ಒದಗಿಸಲು ಹಾಗೂ ಕುಟುಂಬ ನಿರ್ವಹಣೆಗಾಗಿ ಇದ್ದ ಅಂಗಡಿ, ಮನೆ ಎಲ್ಲವನ್ನೂ ಮಾರಿದ್ದಾರೆ.
ಎಲ್ಲವೂ ಖಾಲಿಯಾದ ನಂತರ ಕುಟುಂಬಕ್ಕೆ ಆಹಾರ ಪೂರೈಕೆ ಮಾಡಲು ರಕ್ತ ಮಾರಾಟವನ್ನೂ ಮಾಡಿದ್ದರು. ರಕ್ತ ಮಾರಾಟ ಮಾಡಿದ ನಂತರ ಪ್ರಮೋದ್ ಅನಾರೋಗ್ಯಕ್ಕೆ ತುತ್ತಾಗಿದ್ದರು, ಆ ನಂತರ ಹಣ ಸಂಪಾದನೆ ಮಾಡಲಾಗಲಿಲ್ಲ ಎಂದು ಹಾಸಿಗೆ ಹಿಡಿದಿರುವ ಪುತ್ರಿ ಅನುಷ್ಕಾ ಹೇಳಿದ್ದಾರೆ.
17 ವರ್ಷದ ಅನುಷ್ಕಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು, ಬೋರ್ಡ್ ಪರೀಕ್ಷೆಗಳಲ್ಲೂ ವಿಶೇಷ ಸಾಧನೆ ಮಾಡಿದ್ದರು. ಅದಕ್ಕಾಗಿ ಅವರನ್ನ ಗೌರವಿಸಲಾಗಿತ್ತು. ಅನುಷ್ಕಾ ಹಾಸಿಗೆ ಹಿಡಿದ ನಂತರ ಕೆಲವರು ಸಹಾಯ ನೀಡಿದ್ದರು. ಆದ್ರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗಲಿಲ್ಲ. ನನ್ನ ತಂದೆ ಎಷ್ಟು ಅಲೆದಾಡಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ದಿನನಿತ್ಯದ ಅಗತ್ಯತೆಗಳನ್ನ ಪೂರೈಸಲು ನನ್ನ ತಂದೆ ರಕ್ತವನ್ನೂ ಮಾರಾಟ ಮಾಡಿದ್ರು. ಆದರೂ ಕುಟುಂಬ ನಿರ್ವಹಣೆ ಸಾಧ್ಯವಾಗದೇ ಇದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಷ್ಕಾ ಕಣ್ಣೀರಿಟ್ಟಿದ್ದಾರೆ.
ಸೋಮವಾರ ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಪ್ರಮೋದ್ ನಾಪತ್ತೆಯಾಗಿದ್ದರು. ಒಂದೆರಡುಗಂಟೆಗಳ ಕಾಲ ಹುಡುಕಿದರೂ ಸಿಗದಿದ್ದ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಸನ್ನಾದ ರೈಲ್ವೆ ಹಳಿಯಲ್ಲಿ ಪ್ರಮೋದ್ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸನ್ನಾ ಉಪ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಮಿಶ್ರಾ ಹೇಳಿದ್ದಾರೆ.