ನವದೆಹಲಿ: ಸಣ್ಣ ಪ್ರಮಾಣದ ಉಕ್ಕು ಉತ್ಪಾದಿತ ಕ್ಷೇತ್ರವು ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಕಾರ್ಯಸೂಚಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಹೇಳಿದರು.
ನವದೆಹಲಿಯ (New Delhi) ವಿಜ್ಞಾನ ಭವನದಲ್ಲಿ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳ ಸವಾಲುಗಳ ಕುರಿತು ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಉಕ್ಕು ವಲಯದ ಒಟ್ಟು ಉತ್ಪಾದನೆಯ 50%ರಷ್ಟನ್ನು ಉತ್ಪಾದಿಸುತ್ತಿರುವ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಈ ವಲಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ವಿಚಾರದಲ್ಲಿ ವರಸೆ ಬದಲಿಸಿದ ಸಿಎಂ – ಜೋಶಿ ಆರೋಪ
ಸಣ್ಣ ಗಾತ್ರದ ಉಕ್ಕು ವಲಯವು ಕೇವಲ ಒಂದು ಉದ್ಯಮವಲ್ಲ. ಇದು ದೇಶಿಯ ಕೈಗಾರೀಕರಣದ ಬೆನ್ನೆಲುಬು. ಇದು ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿದೆ ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ. ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವುದು ಮಾತ್ರವಲ್ಲದೆ, ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತವನ್ನು ಶೂನ್ಯ ಇಂಗಾಲ ಬಿಡುಗಡೆ ಹಾಗೂ ಉಕ್ಕು ವಲಯದಲ್ಲಿ ಜಾಗತಿಕ ಸುಸ್ಥಿರ ರಾಷ್ಟ್ರವನ್ನಾಗಿ ಹೊರಹೊಮ್ಮಿಸಲು ನಾವು ದೃಢನಿಶ್ಚಯ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ಪ್ರಜೆಯಾಗದೇ ಮತದಾರರ ಪಟ್ಟಿಯಲ್ಲಿ ಸೋನಿಯ ಗಾಂಧಿ ಸೇರ್ಪಡೆ; ಮತಗಳವು ಆರೋಪಕ್ಕೆ ಬಿಜೆಪಿ ಪ್ರತ್ಯಾರೋಪ
2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ ಆಗಿದೆ. ಈ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಸಣ್ಣ ಗಾತ್ರದ ಉಕ್ಕು ವಲಯವು ಪ್ರಮುಖ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.
ವಿಶೇಷ ಉಕ್ಕಿಗಾಗಿ ಪಿಎಲ್ಐ ಯೋಜನೆ, ಹಸಿರು ಉಕ್ಕು ಪ್ರಮಾಣೀಕರಣ ರೇಟಿಂಗ್ ವ್ಯವಸ್ಥೆ, ಹೈಡ್ರೋಜನ್ ಆಧರಿತ ಉಕ್ಕು ತಯಾರಿಕೆ ಯೋಜನೆಗಳು ಮತ್ತು ಉಕ್ಕಿನ ಸ್ಕ್ರ್ಯಾಪ್ ಮರುಬಳಕೆ ನೀತಿ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಸರ್ಕಾರವು ಕೈಗೊಂಡಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್
ಸರ್ಕಾರದ ಪೂರ್ವಭಾವಿ ಕ್ರಮಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ಇಂಧನ ದಕ್ಷತೆಯು ಇನ್ನು ಮುಂದೆ ಐಚ್ಛಿಕವಲ್ಲ. ತ್ಯಾಜ್ಯ ಶಾಖ ಹೆಚ್ಚಳ, ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಏಕೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳನ್ನು (ಎಂಎಸ್ಎಂಇ) ಉತ್ತೇಜಿಸುತ್ತೇವೆ ಎಂದು ನುಡಿದರು.
ಮನೆ, ಬೃಹತ್ ಕಟ್ಟಡ, ಹೆದ್ದಾರಿ, ಸೇತುವೆ, ರೇಲ್ವೆ, ವಿಮಾನ, ರಾಕೆಟ್ ಸೇರಿದಂತೆ ರಾಷ್ಟ್ರದ ಭವ್ಯ ಇತಿಹಾಸವನ್ನು ನಿರ್ಮಿಸುವ ಉಕ್ಕು ಕ್ಷೇತ್ರವನ್ನು ನಾವು ಮತ್ತಷ್ಟು ಸಶಕ್ತಗೊಳಿಸಬೇಕಿದೆ. ನೀತಿ, ಉದ್ದೇಶ ಮತ್ತು ನಮ್ಮ ಜನರ ಉತ್ಸಾಹದೊಂದಿಗೆ ನಾವು ಭಾರತವನ್ನು ಜಾಗತಿಕ ಉಕ್ಕಿನ ಶಕ್ತಿ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಜಾಗತಿಕವಾಗಿ ಭಾರತದ ಉಕ್ಕು ಉದ್ಯಮಕ್ಕೆ ಏಕೀಕೃತ ಗುರುತನ್ನು ಸಂಕೇತಿಸುವ ಭಾರತ್ ಸ್ಟೀಲ್ ಲೋಗೋ ಮತ್ತು ಭಾರತ್ ಸ್ಟೀಲ್ ಅಂತರ್ಜಾಲ ತಾಣವನ್ನು ಸಚಿವರು ಅನಾವರಣಗೊಳಿಸಿದರು. ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಕನಿಷ್ಠ ಮಟ್ಟಕ್ಕೆ ತಂದಿರುವ ಹಾಗೂ ಉಕ್ಕು ಉತ್ಪಾದನಾ ಮಾನದಂಡಗಳ ಗುರಿಯನ್ನು ಸಾಧಿಸಿದ ಉದ್ಯಮದ ನಾಯಕರಿಗೆ ಗೌರವಿಸಿದರು.