ಬೆಳಗಾವಿ: ಸದನದಲ್ಲಿ ಬಹುಮತ ಇದೆ ಎಂದು ದಬ್ಬಾಳಿಕೆ ಮಾಡಬಾರದು, ವಾಸ್ತವವನ್ನು ಅರಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ಮತಾಂತರ ನಿಷೇಧ ಮಸೂದೆಯನ್ನು ನಾವು ವಿರೋಧಿಸುತ್ತೇವೆ. ಸದನದಲ್ಲಿ ಮಸೂದೆಯನ್ನು ಬಿಜೆಪಿಯವರು ಮಂಡನೆ ಮಾಡಲಿ. ಅದಕ್ಕೆ ನಾವು ಏನೂ ಮಾಡಬೇಕು ಅದನ್ನೇ ಮಾಡುತ್ತೇವೆ. ಪರಿಷತ್ ನಲ್ಲಿ ಮತಾಂತರ ನಿಷೇಧ ಮಸೂದೆ ಜಾರಿ ಆಗಲು ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ ಎಂದು ಹೇಳಿದರು.
ಬೆಳಗಾವಿ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಎಂಇಎಸ್ ಸೇರಿದಂತೆ ಯಾವುದೇ ಸಂಘಟನೆ ಇರಲಿ, ರಾಜ್ಯದಲ್ಲಿ ಶಾಂತಿ ಕೆಡಿಸುವ ಕೆಲಸ ಮಾಡುವವರನ್ನು ಗಡಿಪಾರು ಮಾಡಬೇಕು ಜೊತೆಗೆ ಇನ್ನು ಮುಂದೆ ಈ ರೀತಿ ಅಹಿತಕರ ಘಟನೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯ ಸದುದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಆದರೆ ಯಾವ ಉದ್ದೇಶಕ್ಕೆ ಸುವರ್ಣಸೌಧ ನಿರ್ಮಾಣ ಆಯಿತೋ ಅದರ ಲಾಭ ಮಾತ್ರ ಆಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್: ಸಚಿವ ಈಶ್ವರಪ್ಪ
ಕಳೆದ ಒಂದು ವಾರದಿಂದ ಹೆಚ್ಡಿ ಕುಮಾರಸ್ವಾಮಿ ಕಲಾಪಕ್ಕೆ ಹಾಜರಾಗದೆ ದೂರ ಉಳಿದಿದ್ದರು. ಈ ಬಗ್ಗೆ ಮಾತಾನಾಡಿದ ಅವರು, ಕಳೆದೊಂದು ವಾರದಿಂದ ನಾನು ಬಾರದಿರುವ ಬಗ್ಗೆ ಸ್ಪೀಕರ್ಗೆ ತಿಳಿಸಿದ್ದೇನೆ. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಕೊನೆಯ ಎರಡು ದಿನ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ. ಇಂದು ಸದನಕ್ಕೆ ಹೋಗಲಿದ್ದೇನೆ. ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ್ ಇತರರಿದ್ದರು. ಇದನ್ನೂ ಓದಿ: ರಾಯಣ್ಣರ ಪ್ರತಿಮೆಗೆ ಕೈ ಇಟ್ಟವರ ಮೇಲೆ ಕರುಣೆ ಯಾಕೆ?: ಹೆಚ್ಡಿಕೆ