ವಿಜಯಪುರ: ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆ ಬಗ್ಗೆ ವಿಜಯಪುರದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಐದು ದಿನಗಳ ವಿಜಯಪುರ ಜಿಲ್ಲಾ ಪ್ರವಾಸದಲ್ಲಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು, ನಮ್ಮ ಯುವಕರು ಪಕೋಡಾ ಮಾರಾಟ ಮಾಡಿ ಬದುಕಬೇಕಿದೆ. ಇಲ್ಲವೇ ಸರಗಳ್ಳತನ ಅಥವಾ ಕಳ್ಳತನ ಮಾಡಿ ಬದುಕಬೇಕಿದೆ. ಇದು ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಎಂದು ವ್ಯಂಗ್ಯಮಾಡಿದರು.
ಮೋದಿ ಪ್ರಧಾನ ಮಂತ್ರಿ ಆದ ವೇಳೆ ಪ್ರತಿ ವರ್ಷದ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ವಾಸ್ತವದಲ್ಲಿ ನಾವು ಅವರ ಹೇಳಿಕೆಯನ್ನು ತಪ್ಪಾಗಿ ತಿಳಿದಿದ್ದೇವೆ. ಮೋದಿ ಅವರ ಮೇಕ್ ಇಂಡಿಯಾ ಅಂದರೆ ಪಕೋಡಾ ಮಾರಾಟ ಮಾಡುವುದೂ ಸಹ ಒಂದಾಗಿದೆ. ಉಚಿತ ಸಲಹೆಗಳನ್ನು ನೀಡಲು ಮೋದಿ ಅವರೇ ಪ್ರಧಾನಿಗಳಾಗಬೇಕಾ? ಮೋದಿ ಅವರ ಮೇಕ್ ಇನ್ ಇಂಡಿಯಾ ಏನು ಎಂಬುವುದು ಪ್ರಸ್ತುತ ಜನರಿಗೆ ಗೊತ್ತಾಗಿದೆ ಎಂದರು.
ಇದೇ ವೇಳೆ ಓವೈಸಿ ಜೊತೆ ಬಿಜೆಪಿ ಒಳ ಒಪ್ಪಂದದ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ಡಿಕೆ, ಒಳ ಒಪ್ಪಂದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಜನತೆ ಮುಂದೆ ಇಡಬೇಕು. ಕಾಂಗ್ರೆಸ್ ಗೆ ಮುಸ್ಲಿಂ ಮತಗಳು ಹಿನ್ನೆಡೆಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟ ಆಗುತ್ತದೆ ಎಂಬ ಭಯ ಅವರಿಗಿದೆ. ಹೀಗಾಗಿ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ರಾಷ್ಟ್ರೀಯ ಪಕ್ಷಗಳ ಜೊತೆಗೆ ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೊಂದಿಗೂ ಮೈತ್ರಿ ಮಾಡಲ್ಲ. ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಿಜೆಪಿ ಮೈತ್ರಿ ಮಾಡಿ ನೋಡಲಾಗಿದೆ. ಈ ಬಾರಿ ಸ್ವತಂತ್ರವಾಗಿ 113 ಸಂಖ್ಯೆಯನ್ನು ಜನತೆ ಕೊಡುತ್ತಾರೆ. ಫೆಬ್ರವರಿ 17 ರಂದು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಎಚ್.ಡಿ. ದೇವೇಗೌಡರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಸುಮಾರು 5 ಲಕ್ಷ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಸಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮೊದಲನೆಯ ಹಂತವಾಗಿ 120 ರಿಂದ 130 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ