ಬೆಂಗಳೂರು: ಮುಂದಿನ ವಿಧಾನಸಭೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕು ಅನ್ನೊ ಹಠಕ್ಕೆ ಬಿದ್ದಿರೋ ಜೆಡಿಎಸ್ ವರಿಷ್ಠ ದೇವೇಗೌಡರು, ಭಿನ್ನ-ವಿಭಿನ್ನ ರೀತಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಉತ್ತರ ಕರ್ನಾಟಕ ಶಿಕಾರಿ, ಮಹಿಳಾ ಆದ್ಯತೆ ಬಳಿಕ ಹೊಸ ತಂತ್ರಗಾರಿಕೆ ಮಾಡಿ ಪಕ್ಷ ಸಂಘಟನೆಗೆ ಹೆಚ್ಡಿಡಿ ಮುಂದಾಗಿದ್ದಾರೆ.
ಪಕ್ಷ ಅಧಿಕಾರಕ್ಕೆ ಬರೋದಕ್ಕೆ ಪಕ್ಷ ಸಂಘಟನೆ ಮುಖ್ಯ. ಕೆಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ವಾರದ ವರದಿಯ ಟಾಸ್ಕ್ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನು ಮುಂದೆ ಪ್ರತಿ ಜಿಲ್ಲೆ, ತಾಲೂಕು, ಬೂತ್ ಮಟ್ಟದಲ್ಲಿ ಮಾಡಿದ ಸಂಘಟನೆ ಬಗ್ಗೆ ಪ್ರತಿ ವಾರದ ದೇವೇಗೌಡರಿಗೆ ವರದಿ ನೀಡೋದು ಕಡ್ಡಾಯ. ಪ್ರತಿ ವಾರ ತಮ್ಮ ತಮ್ಮ ವ್ಯಾಪ್ತಿಯ ಸಂಘಟನೆ ಬಗ್ಗೆ ಮಾಹಿತಿ ನೀಡಬೇಕು.
ಜನವರಿ ಬಳಿಕ ಎಲ್ಲಾ ಜಿಲ್ಲೆ, ತಾಲೂಕು, ಬೂತ್ ಮಟ್ಟದ ಸಮಿತಿಗಳನ್ನ ಬದಲಾವಣೆ ಮಾಡೋ ಚಿಂತನೆಯಲ್ಲಿ ದೇವೇಗೌಡರು ಇದ್ದಾರೆ. ಹೊಸ ತಂಡಕ್ಕೆ ಪಕ್ಷ ಸಂಘಟನೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಎಲ್ಲಾ ಹಂತದಲ್ಲೂ ಸಮಿತಿ ರಚನೆ ಮಾಡಲಿದ್ದಾರೆ. ಈ ಸಮಿತಿಯು ಪ್ರತಿವಾರ ತಾವು ಸಂಘಟನೆಗೆ ಮಾಡಿದ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಕಚೇರಿಗೆ ಕೊಡಬೇಕು. ಪಕ್ಷದ ಕಾರ್ಯಕ್ರಮಗಳು, ಸದಸ್ಯ ನೋಂದಣಿ, ಯೋಜನೆಗಳ ಕುರಿತ ಸಂಪೂರ್ಣ ಮಾಹಿತಿ ವಾರದ ರಿಪೋರ್ಟ್ ನಲ್ಲಿ ಇರಬೇಕು. ಈ ವಾರದ ವರದಿ ನೋಡಿ ಮುಂದೆ ಯಾವ ರೀತಿ ಸಂಘಟನೆ ಮಾಡಬೇಕು ಅಂತ ವರಿಷ್ಠರು ಕುಳಿತು ತೀರ್ಮಾನ ಮಾಡ್ತಾರೆ.