ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಪ ಚುನಾವಣೆ ಕೇವಲ ಎಲೆಕ್ಷನ್ ಅಂತ ಆಗದೇ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿದೆ. ಎರಡು ವಿಧಾನಸಭಾ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಆದ್ರೆ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪರಿಗೆ ಮುಖಭಂಗ ಮಾಡಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪದ್ಮವ್ಯೂಹ ರಚಿಸಿದ್ದಾರಂತೆ. ತಂದೆಯ ಸಲಹೆಯಂತೆ ಸಿಎಂ ಕುಮಾರಸ್ವಾಮಿ ಸಹ ಪದ್ಮವ್ಯೂಹದ ಆಟಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏನದು ಪದ್ಮವ್ಯೂಹ?
ಇದೇ ಪದ್ಮವ್ಯೂಹವನ್ನು 2006ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ದೇವೇಗೌಡರು ರಚಿಸಿದ್ದರು. ಆದ್ರೆ ಅಂದು ರಾಜಕೀಯ ಲೆಕ್ಕಾಚಾರ ಕೈತಪ್ಪಿದ್ದರಿಂದ ಪದ್ಮವ್ಯೂಹ ರಚನೆ ವಿಫಲ ಕಂಡಿತ್ತು. ಇಂದು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಿದ್ದು, ಬಿ.ಎಸ್.ಯಡಿಯೂರಪ್ಪರ ವಿರುದ್ಧ ಮತ್ತೊಮ್ಮೆ ಸುಧಾರಿತ ಪದ್ಮವ್ಯೂಹ ರಚನೆಗೆ ದೇವೇಗೌಡರು ಮುಂದಾಗಿದ್ದಾರೆ ಎನ್ನುವುದು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿರುವ ಮಾತುಗಳು.
ಶಿವಮೊಗ್ಗ ಉಪ ಸಮರದ ನೇತೃತ್ವವನ್ನು ಕುಮಾರಸ್ವಾಮಿ ಅವರು ವಹಿಸಿಕೊಂಡಿದ್ದಾರೆ. ರಾಮನಗರ, ಮಂಡ್ಯಕ್ಕಿಂತ ಶಿವಮೊಗ್ಗದಲ್ಲೇ ಹೆಚ್ಚು ದಿನ ಪ್ರಚಾರ ಮಾಡಲು ಸಿಎಂ ಯೋಚಿಸಿದ್ದಾರೆ. ಮಂಡ್ಯಕ್ಕೆ 1 ದಿನ, ರಾಮನಗರಕ್ಕೆ 2 ದಿನ, 5ಕ್ಕೂ ಹೆಚ್ಚು ದಿನ ಶಿವಮೊಗ್ಗದಲ್ಲಿ ಸಿಎಂ ಕ್ಯಾಂಪೇನ್ ಮಾಡಲಿದ್ದಾರೆ. ಬಹುತೇಕ ಸಚಿವರು ಮತ್ತು ಹಿರಿಯ ನಾಯಕರು ಸಹ ಶಿವಮೊಗ್ಗದಲ್ಲಿ ಉಳಿದುಕೊಂಡು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಬಿಜೆಪಿ ಭದ್ರಕೋಟೆ ಮತ್ತು ಸ್ವಕ್ಷೇತ್ರದಲ್ಲಿಯೇ ಯಡಿಯೂರಪ್ಪರಿಗೆ ತಿರುಗೇಟು ನೀಡಲು ದೇವೇಗೌಡರು ಪ್ಲಾನ್ ಮಾಡಿದ್ದಾರಂತೆ. ಕಾಂಗ್ರೆಸ್ನ ಬೈ ಎಲೆಕ್ಷನ್ ಸ್ಪೆಶಲಿಸ್ಟ್ ಸಚಿವ ಡಿ.ಕೆ.ಶಿವಕುಮಾರ್ ಸಹ ದೇವೇಗೌಡರಿಗೆ ಸಾಥ್ ನೀಡಲಿದ್ದಾರೆ. 2006ರಲ್ಲಿಯೂ ಸಿದ್ದರಾಮಯ್ಯರ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದು ಕುಮಾರಸ್ವಾಮಿ ಅತಿ ಹೆಚ್ಚು ದಿನ ಪ್ರಚಾರ ನಡೆಸಿದ್ದರು. ಆದ್ರೆ ಸಿದ್ದರಾಮಯ್ಯ ಪದ್ಮವ್ಯೂಹ ಭೇದಿಸಿ ಗೆಲುವು ಸಾಧಿಸಿದ್ದರು. ದೊಡ್ಡಗೌಡರ ರಚನೆಯ ಪದ್ಮವ್ಯೂಹದಲ್ಲಿ ಯಡಿಯೂರಪ್ಪ ಸಿಲುಕ್ತಾರಾ ಅಥವಾ ಪಾರಾಗ್ತಾರಾ ಎಂಬವುದು ನವೆಂಬರ್ 6ರಂದು ತಿಳಿಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv