ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿ ಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳ ನಿರ್ದೇಶಕ ಹಯವದನ ಸಿನಿಮಾ ನಿರ್ದೇಶನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಯವದನ ಅವರ ಮೊದಲ ಸಿನಿಮಾ ಸ್ಕ್ರಿಪ್ಟ್ ಪೂಜೆ ನಡೆದಿದ್ದು ನಾಯಕ ನಟನಾಗಿ ‘ಕಂಬ್ಳಿಹುಳ’ ಸಿನಿಮಾ ಖ್ಯಾತಿಯ ಅಂಜನ್ ನಾಗೇಂದ್ರ ಆಯ್ಕೆಯಾಗಿದ್ದಾರೆ.
ಕಿರುತೆರೆಯಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಹಯವದನ ಅವರು ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಹಲವು ಸೂಪರ್ ಹಿಟ್ ಸೀರಿಯಲ್ ಗಳನ್ನು ನಿರ್ದೇಶನ ಮಾಡಿದ್ದೇನೆ. ಸಿನಿಮಾ ನಿರ್ದೇಶನ ಇದೇ ಮೊದಲು. ಇದೊಂದು ಸೋಶಿಯಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಜರ್ನಿ ಸಿನಿಮಾ. ಅಪ್ಪ ಮಗನ ಸೆಂಟಿಮೆಂಟ್ ಚಿತ್ರದ ಮೈನ್ ಹೈಲೈಟ್. ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡಿರುವ ಪೋಷಕರ ನಡುವಿನ ಜನರೇಶನ್ ಗ್ಯಾಪ್ ನ್ನು ಚಿತ್ರದಲ್ಲಿ ಹೇಳಲಿದ್ದೇವೆ. ಲವ್ ಟ್ರ್ಯಾಕ್ ಚಿತ್ರದಲ್ಲಿದ್ದು, ಯುವಕರಿಗೆ ಸ್ಪಂದಿಸೋ ಸ್ಪೂರ್ತಿಯಾಗೋ ಕಥೆ ಕೂಡ ಇದೆ. ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದ್ದು ಜನವರಿ 15ಕ್ಕೆ ಸಿನಿಮಾ ಸೆಟ್ಟೇರಲಿದೆ. ಅಂಜನ್ ನಾಗೇಂದ್ರ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಹಯವದನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನ ಚಿತ್ರಕ್ಕಿರಲಿದೆ. ನಾಯಕಿ, ತಾರಾಬಳಗದ ಆಯ್ಕೆ ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳೋದಾಗಿ ಹಯವದನ ತಿಳಿಸಿದ್ದಾರೆ.