ಹಾವೇರಿ: ಹಾವೇರಿ ರೈಲು ನಿಲ್ದಾಣದಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಯನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾನೆ.
ಅನ್ನಪೂರ್ಣ ಗಾಯಗೊಂಡಿದ್ದ ವೃದ್ಧೆ. ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ನೇತೃತ್ವದಲ್ಲಿ ಕೆಲವರು ವೃದ್ಧೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋಗುತ್ತಿರುವ ರೈಲಿನಿಂದ ಅನ್ನಪೂರ್ಣ ಅವರು ಬಿದ್ದು ಗಾಯಗೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ವೃದ್ಧೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಮೈಮೇಲಿನ ಚಿನ್ನಾಭರಣಗಳನ್ನು ಅಬ್ದುಲ್ ಖಾದರ್ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನ್ನಪೂರ್ಣ ಅವರ ವಿಳಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರಿಗೆ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ವಿಚಾರಿಸಿ ಕುಟುಂಬಸ್ಥರನ್ನು ಸಂಪರ್ಕಿಸಲಾಗುತ್ತದೆ. ಜೊತೆಗೆ ಚಿನ್ನಾಭರಣವನ್ನು ಅನ್ನಪೂರ್ಣ ಅವರ ಕುಟುಂಬಸ್ಥರಿಗೆ ಮುಟ್ಟಿಸುವ ಜವಾಬ್ದಾರಿಯನ್ನ ಅಬ್ದುಲ್ ಖಾದರ್ ಹೊತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.