ಹಾವೇರಿ: ರಾಜ್ಯದಲ್ಲಿ ಇವತ್ತಿನ ರಾಜಕೀಯ ಪರಿಸ್ಥಿತಿಗೆ ಮಾಜಿ ಮುಖ್ಯಮಂತ್ರಿ ಕಾರಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅಸಮಾಧಾನ ಹೊರಹಾಕಿದ್ದಾರೆ.
ಇಂದು ರಾಣೇಬೆನ್ನೂರಿನಲ್ಲಿ ಅವರ ನಿವಾಸದಲ್ಲಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತಿನ ರಾಜಕೀಯ ವಿಚಾರದ ಹಿಂದೆ ಯಾರಿದ್ದಾರೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅದನ್ನು ನನ್ನ ಬಾಯಿಂದ ಏಕೆ ಹೇಳಿಸ್ತೀರಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ರಾಜೀನಾಮೆ ನೀಡಿರುವ ಶಾಸಕ ಆರ್.ಶಂಕರ್ ಬಗ್ಗೆ ಮಾತನಾಡಿ, ನಾನು ಅವತ್ತೇ ಅವರು ಪಕ್ಷ ಸೇರ್ಪಡೆ ಆಗುವುದನ್ನು ವಿರೋಧಿಸಿದ್ದೆ. ಆರ್.ಶಂಕರ್ ಆಯಾ ರಾಮ ಗಯಾ ರಾಮ ಇದ್ದಂತೆ. ರಾಣೇಬೆನ್ನೂರು ಕ್ಷೇತ್ರದಿಂದ ಆಯ್ಕೆ ಆದವರ ಪೈಕಿ ಈವರೆಗೆ ಯಾರೂ ಶಂಕರ್ ರೀತಿಯ ರಾಜಕಾರಣ ಮಾಡಿಲ್ಲ. ಶಾಸಕ ಶಂಕರ್ ತಾಲೂಕಿನ ಜನರ ಮಾನ ಹರಾಜು ಹಾಕಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಸ್ತುತ ರಾಜಕೀಯ ಬೆಳವಣಿಗೆ ಬೇಸರ ತರಿಸಿದೆ. ಸಮ್ಮಿಶ್ರ ಸರ್ಕಾರದ ಬದಲು ಪ್ರತಿಪಕ್ಷದ ಸ್ಥಾನದಲ್ಲಿ ಕೂರೋದು ಒಳ್ಳೆಯದು. ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಹೋರಾಟ ಮಾಡೋಣ ಎಂದು ಹೇಳಿದರು.