ಬೆಂಗಳೂರು: ದಶಕಗಳ ಬಳಿಕ ರೀ ಎಂಟ್ರಿ ಕೊಟ್ಟ ನಾಗರಹಾವು ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿದ್ದು, ವಿಶೇಷವಾಗಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು ನಗರದ ನರ್ತಕಿ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿದರು.
ವಾರಾಂತ್ಯದ ಅವಧಿಯ ಭಾನುವಾರದ ದಿನವಾದ್ದರಿಂದ ಚಿತ್ರಮಂದಿರದ ಮುಂದೇ ಭಾರೀ ಜನಸಾಗರವೇ ತುಂಬಿ ತುಳುಕಿತ್ತು. ಹೊಸ ತಂತ್ರಜ್ಞಾನದೊಂದಿಗೆ ಬಂದಿರುವ ನಾಗರಹಾವು ಸಿನಿಮಾ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಕೇವಲ ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ಹಲವು ಸಿನಿಮಾ ಕೇಂದ್ರಗಳಲ್ಲೂ ಬಿಡುಗಡೆಯಾಗಿರುವ ನಾಗರಹಾವು ಸಿನಿಮಾ ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಇದರೊಂದಿಗೆ ಈ ಹಿಂದೆ ಸಿನಿಮಾ ನೋಡಿದ್ದ ಅಭಿಮಾನಿಗಳು ಸಹ ಹೊಸ ತಂತ್ರಜ್ಞಾನದಲ್ಲಿ ವಿಷ್ಣುವರ್ಧನ್ ಅವರನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ಅವರು ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ತಂದಿದ್ದಾರೆ.
70ರ ದಶಕದಲ್ಲಿ ನಾಗರಹಾವು ಚಿತ್ರ ತೆರೆಕಂಡಿದ್ದ ಬಳಿಕ ಮತ್ತೊಮ್ಮೆ ಚಿತ್ರ ಹೊಸ ರೂಪದಲ್ಲಿ ಮರು ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯ ಮೊದಲ ದಿನವೇ ರಾಜ್ಯದ ಬಾಗಲಕೋಟೆ, ಹುಬ್ಬಳ್ಳಿ, ತುಮಕೂರು, ರಾಯಚೂರು, ದಾವಣಗೆರೆಯಲ್ಲಿ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದರು. ಅಲ್ಲದೇ ರಾಮಚಾರಿ ಭಾವಚಿತ್ರವಿರುವ ಕೇಕ್ ಕಟ್ ಮಾಡಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದ್ದರು.