– ಭಾರೀ ಮಳೆಗೆ ಹಾಸನ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಅವಾಂತರ
ಹಾಸನ: ಜಿಲ್ಲೆಯ ಹಲವೆಡೆ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೂವತ್ತು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಸುತ್ತಮುತ್ತ ಹಲವು ಹಳ್ಳಿಗಳಲ್ಲಿ ರಾತ್ರಿ ಸುರಿದ ಭರ್ಜರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬಸವಾಪಟ್ಟಣ ಗ್ರಾಮದಲ್ಲಿ ಸುಮಾರು ಮೂವತ್ತು ಮನೆಗಳಿಗೆ ಮಳೆ ನೀರು ನುಗ್ಗಿದೆ. ಪರಿಣಾಮ ದಿನ ಬಳಕೆಯ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಸಿಬ್ಬಂದಿ ಮೇಲಿನ ಕೋಪಕ್ಕೆ ಮಗನ ಮೇಲೆ ಗುಂಡು ಹಾರಿಸಿದ ತಂದೆ!
ಕಾಳೇನಹಳ್ಳಿ ಗ್ರಾಮದಲ್ಲಿ ಮಳೆ ನೀರಿಗೆ ರಸ್ತೆ ಕೊಚ್ಚಿಹೋಗಿದ್ದು, ಕೇರಳಾಪುರ ಹಾಗೂ ರಾಮನಾಥಪುರಕ್ಕೆ ಸಂಚರಿಸಲು ತೊಂದರೆಯಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಒದಗಿಸಿದ್ದಾರೆ. ಆಂಜನೇಯ ಹೊಸಹಳ್ಳಿ ಕೆರೆ ಮಳೆ ನೀರಿಗೆ ಕೋಡಿ ಬಿದ್ದಿದೆ. ಶಿರಗನಹಳ್ಳಿ ಗ್ರಾಮದ ಸಮೀಪ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಹಲವು ವಿದ್ಯುತ್ ಕಂಬ ಧರೆಗುರುಳಿವೆ.
ರಸ್ತೆಗೆ ಮರ ಬಿದ್ದಿರುವುದರಿಂದ ಕೇರಳಾಪುರ ರಾಮನಾಥಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮರವನ್ನು ರಸ್ತೆಯಿಂದ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಆರ್ಐ ಸ್ವಾಮಿ, ವಿಎಗಳಾದ ಮದನ್, ಯಾದವ್, ಉಮೇಶ್, ಪೂಜಾರಿ ಮತ್ತು ತಂಡದಿಂದ ಪರಿಹಾರ ಕಾರ್ಯ ಭರದಿಂದ ಸಾಗಿದೆ. ಇದನ್ನೂ ಓದಿ: ಸಾರ್ವಜನಿಕ ಶೌಚಾಲಯದಿಂದ ಹೊರಬಂದ ಸಿಂಹ- ವೀಡಿಯೋ ವೈರಲ್
ಮಳೆ ಹಾನಿಗೊಳಗಾಗದವರಿಗೆ ಶೀಘ್ರ ಪರಿಹಾರ ಒದಗಿಸುವುದಾಗಿ ಆರ್ಐ ಸ್ವಾಮಿ ಭರವಸೆ ನೀಡಿದ್ದಾರೆ.