– ಸ್ಟಾಂಪ್ ನೋಡಿ ಗಾಬರಿಗೊಂಡ ಜನತೆ
– ಆರೋಗ್ಯಾಧಿಕಾರಿಗಳ ಜೊತೆ ಯುವತಿ ವಾಗ್ವಾದ
ಹಾಸನ: ಶನಿವಾರ ತಾನೇ ಸಿಂಗಾಪೂರ್ನಿಂದ ಬಂದಿದ್ದ ಯುವತಿಯೋರ್ವಳು ಇಂದು ಪಾರ್ಕಿನಲ್ಲಿ ಸುತ್ತಾಡಿ ಜನಸಾಮಾನ್ಯರನ್ನು ಆತಂಕ ಪಡುವಂತೆ ಮಾಡಿರುವ ಘಟನೆ ಹಾಸನದ ರವೀಂದ್ರ ನಗರದಲ್ಲಿ ನಡೆದಿದೆ.
ಶನಿವಾರ ಸಂಜೆ ಸಿಂಗಾಪೂರ್ನಿಂದ ಹಾಸನಕ್ಕೆ ಬಂದಿದ್ದ ಯವತಿಯನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ನಂತರ ಅವಳ ಕೈಗೆ ಸ್ಟಾಂಪ್ ಹಾಕಿ 14 ದಿನ ಎಲ್ಲಿಗೂ ತೆರಳಬಾರದು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಆದರೆ ಇದಕ್ಕೆ ಬೆಲೆ ಕೊಡದ ಯುವತಿ ಇಂದು ಪಾರ್ಕಿಗೆ ಬಂದಿದ್ದಾಳೆ.
ಈ ವೇಳೆ ಕೈಯಲ್ಲಿ ಇರುವ ಸ್ಟಾಂಪ್ ನೋಡಿ ಸ್ಥಳೀಯರು ಭಯಗೊಂಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು, ನೀವು ಹೊರಗೆ ಏಕೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಗರಂ ಆದ ಯುವತಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾಳೆ. ಕೊನೆಗೆ ಅಧಿಕಾರಿಗಳು ಮನವೊಲಿಸಿ ಆಸ್ಪತ್ರೆ ಬನ್ನಿ ಎಂದು ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ಒಪ್ಪದೆ ಹಠಕ್ಕೆ ಬಿದ್ದ ಯುವತಿ ಹೈಡ್ರಾಮವನ್ನೇ ಸೃಷ್ಟಿಸಿದ್ದಾಳೆ. ಕೊನೆಗೆ ಯುವತಿಯನ್ನು ಮನವೊಲಿಸಿದ ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಸಿಂಗಾಪೂರ್ನಿಂದ ಬಂದ ಯುವತಿ ಬೆಂಗಳೂರಿನಿಂದ ಹಾಸನಕ್ಕೆ ಮೂವರ ಜೊತೆ ಒಂದೇ ಕಾರಿನಲ್ಲಿ ಬಂದಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ಯುವತಿ ಬಾಡಿಗೆ ಮನೆಯಲ್ಲಿ ಇದ್ದು, ಮನೆ ಖಾಲಿ ಮಾಡುವಂತೆ ಮನೆ ಮಾಲೀಕ ಪಟ್ಟು ಹಿಡಿದಿದ್ದಾರೆ. ಇದರಿಂದ ಅಕ್ಕ ಪಕ್ಕದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಹಾಸನ ಡಿಹೆಚ್ಓ ಭೇಟಿ ನೀಡಿದ್ದಾರೆ.