ಹಾಸನ: ಇವರು ನನ್ನನ್ನು ತಳ್ಳುತ್ತಿದ್ದಾರೆ. ನನ್ನ ಜೊತೆ ಮಿಸ್ಬೇವ್ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಶಾಸಕ ಕೆಎಂ.ಶಿವಲಿಂಗೇಗೌಡ ವಿರುದ್ಧ ರೈಲ್ವೆ ಮಹಿಳಾ ಅಧಿಕಾರಿ ಗಂಭೀರ ಆರೋಪ ಮಾಡಿ, ಸಾರ್ವಜನಿಕರ ಎದುರೇ ಆಕ್ರೋಶ ಹೊರಹಾಕಿದ್ದಾರೆ.
ಇಂದು ನೈಋತ್ಯ ರೈಲ್ವೆ ವಿಭಾಗದ ಜಿಎಂ ಅಜಯ್ ಕುಮಾರ್ ಸಿಂಗ್ ಮತ್ತು ಮೈಸೂರು ವಿಭಾಗದ ಡಿ.ಆರ್.ಎಂ ಅಪರ್ಣ ಖರ್ಗ್ ಅರಸೀಕೆರೆಗೆ ಆಗಮಿಸಿದ್ದರು. ಅರಸೀಕೆರೆ ನಗರದ ಅಂಚೆಕೊಪ್ಪಲಿನಿಂದ ಅರಸೀಕೆರೆ ನಗರಕ್ಕೆ ಮೇಲ್ಸೇತುವೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಲು ಶಾಸಕ ಶಿವಲಿಂಗೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಅಧಿಕಾರಿಗಳ ಬಳಿ ತೆರಳಿ ಚರ್ಚೆ ನಡೆಸಿದರು.
ಈ ವೇಳೆ ಮಹಿಳಾ ಅಧಿಕಾರಿ ಅಪರ್ಣಾ ಖರ್ಗ್, ತಮ್ಮ ಹಿಂದೆ ನಿಂತಿದ್ದ ಶಾಸಕ ಶಿವಲಿಂಗೇಗೌಡ ವಿರುದ್ಧ ಮಿಸ್ಬೇವ್ ಮಾಡುತ್ತಿದ್ದಾರೆ ಎಂದು ಏಕಾಏಕಿ ಆಕ್ರೋಶ ಹೊರಹಾಕಿದ್ರು. ಮಹಿಳಾ ಅಧಿಕಾರಿ ಆರೋಪದಿಂದ ಬೇಸರಗೊಂಡ ಶಾಸಕ ಶಿವಲಿಂಗೇಗೌಡ, ಹಿಂದೆಯಿಂದ ಜನ ತಳ್ಳಿದಾಗ ನಾನು ಮುಂದೆ ಬಂದೆ. ಇದನ್ನು ಮಿಸ್ ಬಿಹೇವ್ ಎಂದರೆ ಹೇಗೆ ಎಂದು ಮಹಿಳಾ ಅಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು.
ತಕ್ಷಣ ಮಹಿಳಾ ಅಧಿಕಾರಿಯನ್ನು ಸಮಾಧಾನ ಮಾಡಲು ಮುಂದಾದ ಅಧಿಕಾರಿಗಳು ಮತ್ತು ಸ್ಥಳೀಯರು, ಅವರ ಬಗ್ಗೆ ತಪ್ಪು ತಿಳಿಯಬೇಡಿ ಎಂದು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಅದು ಸಫಲವಾಗಲಿಲ್ಲ.