ಹಾಸನ: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ಅನ್ನದಾತರೊಬ್ಬರು ಮನವಿ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕರಸಳ್ಳಿ ರೈತ ನಂಜೇಶಿಯವರು ನಮಗೆ ಸಾಲಮನ್ನಾ ಬೇಡ. ದಯವಿಟ್ಟು ನೀರು ಒದಗಿಸಿ ಸ್ವಾಮಿ ಎಂದು ಪರಿಪರಿಯಾಗಿ ಅಲವತ್ತುಕೊಂಡಿರೋ ಈ ವಿಡಿಯೋ ಮನಕಲಕುವಂತಿದೆ.
ಬಾಗೂರು-ನವಿಲೆ ಸುರಂಗ ಮಾರ್ಗದ ಸಮೀಪದಲ್ಲಿರುವ ತೆಂಗಿನ ತೋಟ ನೀರಿನ ಕೊರತೆಯಿಂದ ಒಣಗಿ ಹೋಗಿದೆ. ಹಾಗಾಗಿ ನೀರಾವರಿ ಸೌಲಭ್ಯ ಒದಗಿಸಿಕೊಡಿ ಎಂದು ಮುಖ್ಯಮಂತ್ರಿ ತವರೂರಿನಲ್ಲಿ ಅನ್ನದಾತನ ನಂಜೇಶಿ ವಿಡಿಯೋ ಮಾಡುವ ಮೂಲಕ ತನ್ನ ಅಲವತ್ತುಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?:
ಕುಮಾರಣ್ಣ ನಿಮ್ಮೂರು ಕಣಣ್ಣ ನಮ್ದು. ನಮ್ಮ ಪಾಡು ನೋಡಣ್ಣ ಇಲ್ಲಿ ಯಾವ ಮಟ್ಟಕ್ಕೆ ಆಗಿದೆಯೆಂದು. ಇಲ್ಲೇ ಪಕ್ಕದಲ್ಲಿ 5 ಕಿ.ಮೀ ಸುರಂಗ ಹೋಗಿದೆಯಲ್ಲಣ್ಣ. ನಿಮ್ಮೂರಿನ ಪಕ್ಕದಲ್ಲೇ ಇದ್ದೀವಿ ಅಣ್ಣ ನಾವು. ನಮ್ಮನ್ನ ಜ್ಞಾಪಿಸಲೇ ಇಲ್ವಲ್ಲಣ್ಣ. ಎಲೆಕ್ಷನ್ ಬಂದಾಗ ಮಾತ್ರ ನಮ್ಮನ್ನ ನೆನಪು ಮಾಡಿಕೊಳ್ತೀರಲ್ವ ಅಣ್ಣ. ನಮ್ಮ ಪಾಡು ನೋಡಣ್ಣ ಅಂತ ಕಣ್ಣೀರು ಹಾಕಿದ್ದಾರೆ.
ಒಂದು ಬಾರಿ ಇಲ್ಲಿ ನೋಡಣ್ಣ. ಇಲ್ಲಿ ಬಂದು ನೋಡಿದ್ರೆ ನಮ್ಮ ಕಷ್ಟ ನಿಮಗೆ ಅರ್ಥವಾಗುತ್ತೆ ಅಣ್ಣ. ಸಾಲಮನ್ನಾ ಬೇಡ ಅಣ್ಣ. ನಮಿಗೆ ನೀರು ಕೊಟ್ರೆ ಸಾಕಣ್ಣ. ಕೈ ಮುಗಿದು ಬೇಡಿಕೊಳ್ಳುತ್ತೇನೆ ಅಣ್ಣ. ನನ್ನ ಪರಿಸ್ಥಿಯನ್ನು ಬಂದು ನೋಡ್ಬೇಕು ಅಣ್ಣ ನೀನು ಅಂತ ಕಣ್ಣೀರು ಸುರಿಸುತ್ತಲೇ ಸಿಎಂ ಅವರನ್ನು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews
https://www.youtube.com/watch?v=3L9QDMumJvE&feature=youtu.be