ಹಾಸನ: ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕಿನ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ.
ಶನಿವಾರ ಸಂಜೆ ಹೊಂಕರವಳ್ಳಿ, ಕುನಿಗನಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿಸಲಗವೊಂದು ಇಂದೂ ಕೂಡ ಬ್ಯಾಗಡಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಹೊಂಕರವಳ್ಳಿ ಸರ್ಕಲ್ ನಲ್ಲಿ ಶನಿವಾರ ರಾಜಾರೋಷವಾಗಿ ಬಂದ ಒಂಟಿಸಲಗ ಯಾವುದೇ ಅಡ್ಡಿ ಇಲ್ಲದೆ ರಸ್ತೆ ಮುಖಾಂತರವೇ ತನ್ನ ರಾಜ ನಡಿಗೆ ತೋರಿತ್ತು. ಆನೆ ರಾಜಾರೋಷವಾಗಿ ನಡೆಯುತ್ತಿರೋ ಈ ದೃಶ್ಯವನ್ನು ಕೆಲ ಯುವಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಉದ್ದನೆಯ ದಂತಗಳನ್ನು ಹೊಂದಿರುವ ಈ ಗಜರಾಜನನ್ನು ಕಾಡಿಗೆ ಅಟ್ಟಲು ಗ್ರಾಮಸ್ಥರೇ ಮುಂದಾಗಿದ್ದರು. ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಒಟ್ಟಿನಲ್ಲಿ ಆನೆ ಕಾರಿಡಾರ್ ನಿರ್ಮಾಣದ ಅವಶ್ಯಕತೆ ಇದ್ದು ಸರ್ಕಾರ ಶೀಘ್ರ ಕ್ರಮಗಳಿಗೆ ಮುಂದಾಗಬೇಕಿದೆ.