ಹರಿದ್ವಾರ: ತಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಕೊಂದು ಹಾಕಿವೆ ಎಂಬ ಕಾರಣಕ್ಕೆ ಮಾಲೀಕ ವಿಷ ಹಾಕಿ ಮೂರು ಚಿರತೆಗಳನ್ನು ಕೊಂದಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.
ನಾಯಿಯ ಮಾಲೀಕನನ್ನು ಸುಖ್ಪಾಲ್ ಎಂದು ಗುರುತಿಸಿದ್ದು, ಆರೋಪಿಯು ನಾನು ಚಿರತೆಗಳಿಗೆ ವಿಷಪ್ರಾಶನ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ನನ್ನ ಮೂರು ನಾಯಿ ಮರಿಗಳನ್ನು ಹೊತ್ತುಕೊಂಡು ಹೋಗಿದ್ದ ಚಿರತೆ ಒಂದನ್ನು ಸಾಯಿಸಿ ಇನ್ನೆರೆಡು ಮರಿಗಳನ್ನು ತೀವ್ರವಾಗಿ ಗಾಯಗೊಳಿಸಿದ್ದವು. ಈ ಕಾರಣದಿಂದ ನಾನು ಚಿರತೆಗಳಿಗೆ ವಿಷ ಹಾಕಿದ್ದೆ ಎಂದು ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಈ ಘಟನೆ ರಾಜಾಜಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದ್ದು, ಆರೋಪಿ ಸುಖ್ಪಾಲ್ ಕೀಟನಾಶಕವನ್ನು ಸತ್ತ ನಾಯಿಯ ಶವದ ಮೇಲೆ ಅಪಾರ ಪ್ರಮಾಣದಲ್ಲಿ ಸಿಂಪಡಿಸಿ ನಂತರ ಮೃತ ದೇಹವನ್ನು ಕಾಡಿನೊಳಗೆ ಎಸೆದಿದ್ದಾನೆ. ನಾಯಿಯ ಮಾಂಸವನ್ನು ತಿಂದ ಮೂರು ಚಿರತೆಗಳು ಸಾವನ್ನಪ್ಪಿವೆ.
ಆಗಸ್ಟ್ 5 ರಂದು ಉದ್ಯಾನವನದ ವಿವಿಧ ಭಾಗಗಳಲ್ಲಿ ಮೂರು ಚಿರತೆಯ ಶವಗಳು ಪತ್ತೆಯಾದ ಕಾರಣ ಅಲ್ಲಿನ ಅಧಿಕಾರಿಗಳು ಚಿರತೆಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಮೂರು ಚಿರತೆಗಳು ಒಂದೇ ನಾಯಿಯ ಮಾಂಸವನ್ನು ಸೇವಿಸಿ ಮೃತ ಪಟ್ಟಿವೆ, ಅ ಮಾಂಸದಲ್ಲಿ ಅಪಾರ ಪ್ರಮಾಣದ ವಿಷ ಇದೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದರು.
ಮರಣೋತ್ತರ ಪರೀಕ್ಷೆ ಮಾಹಿತಿ ಪಡೆದ ಅಧಿಕಾರಿಗಳು ತನಿಖೆ ಮಾಡಿದಾಗ, ಅರಣ್ಯದ ನರ್ಸರಿಯಲ್ಲಿ ಬಳಸುವ ಕೀಟನಾಶಕದಿಂದ ಚಿರತೆಗಳು ಸಾವನ್ನಪಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಸುಖ್ಪಾಲ್ ಚಿರತೆಗಳಿಗೆ ವಿಷ ಹಾಕಿರುವುದು ತಿಳಿದು ಬಂದಿದೆ. ಆರೋಪಿ ಸುಖ್ಪಾಲ್ನ ಹೆಂಡತಿ ಅರಣ್ಯದ ನರ್ಸರಿಯಲ್ಲಿ ಗುತ್ತಿಗೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದು, ಅವಳ ಕಡೆಯಿಂದ ಸತ್ತ ನಾಯಿಯ ದೇಹಕ್ಕೆ ಕೀಟನಾಶಕವನ್ನು ಹಾಕಿ ಚಿರತೆಗಳನ್ನು ಕೊಂದೆ ಎಂದು ಸುಖ್ಪಾಲ್ ಒಪ್ಪಿಕೊಂಡಿದ್ದಾನೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅಪಾರ ಪ್ರಮಾಣದ ಕೀಟನಾಶಕವನ್ನು ನಾಯಿಯ ದೇಹದ ಮೇಲೆ ಹಾಕಿದ ಕಾರಣ ಅದನ್ನು ಸೇವಿಸಿದ ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ. ಸುಖ್ಪಾಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.