ಬಳ್ಳಾರಿ: ಐತಿಹಾಸಿಕ ಹಂಪಿ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆಯೇ, ಹಂಪಿ ನದಿ ತೀರದಲ್ಲಿ ತುಂಗಾರತಿ ಮಾಡುವ ಮೂಲಕ ಹಂಪಿ ಉತ್ಸವಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಿದರು. ವಿಜಯನಗರ ಪರಂಪರೆಯನ್ನು ಮುಂದುವರಿಸುವ ತುಂಗಾರತಿ ಕಾರ್ಯಕ್ರಮವನ್ನು ನದಿತಟದಲ್ಲಿ ನೋಡಲು ಜನಸಾಗರವೇ ಹರಿದು ಬಂದಿತ್ತು.
ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಉಲ್ಲೇಖಸಿದಂತೆ ಹಂಪಿ ದಸರಾ ಉತ್ಸವದ ವೇಳೆ ಈ ರೀತಿ ತುಂಗಾರತಿ ಮಾಡುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದರಂತೆ ಆ ಪರಂಪರೆಯನ್ನು ಮುಂದುವರಿಸೋ ನಿಟ್ಟಿನಲ್ಲಿ ಇದೀಗ ಹಂಪಿ ಉತ್ಸವದ ವೇಳೆ ತುಂಗಾರತಿ ಮಾಡುವ ಪರಂಪರೆಯನ್ನು ಹುಟ್ಟು ಹಾಕಲಾಗಿದೆ. ಅಲ್ಲದೆ ತುಂಗಾರತಿ ಮೂಲಕವೇ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆ.ಶಿವಕುಮಾರ್ ಹಿಂದಿನ ಪರಂಪರೆಯನ್ನು ನಮ್ಮ ಸರ್ಕಾರ ಮುಂದುವರಿಸುತ್ತಿದೆ. ಎಂ.ಪಿ. ಪ್ರಕಾಶ್ ಅವರ ಆಶಯದಂತೆ ಪ್ರತಿ ವರ್ಷ ಅದ್ಧೂರಿಯಾಗಿ ಉತ್ಸವ ನಡೆಯುತ್ತದೆ ಎಂದರು.
ದಿವಂಗತ ಎಂ.ಪಿ. ಪ್ರಕಾಶ್ ಅವರ ಕನಸಿನ ಕೂಸೆಂದು ಬಿಂಬಿಸಲಾಗುವ ಹಂಪಿ ಉತ್ಸವವನ್ನು ಪ್ರತಿ ವರ್ಷ ನವೆಂಬರ್ 3, 4 ಮತ್ತು 5ರಂದು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಉಪಚುನಾವಣೆ ಮತ್ತು ಬರದ ನೆಪವೊಡ್ಡಿ ಉತ್ಸವ ರದ್ದು ಮಾಡಲು ಯೋಚನೆ ಮಾಡಲಾಗಿತ್ತು. ಆದರೆ ಕಲಾವಿದರ ಮತ್ತು ಹೋರಾಟಗಾರರ ಪ್ರತಿಭಟನೆಯಿಂದಾಗಿ ಇದೀಗ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಉತ್ಸವದ ಉದ್ಘಾಟನೆಗೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಬಂದು ಉತ್ಸವವನ್ನು ರಂಗೇರಿಸಿದರೆ, ಗಾಯಕ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗನ್ನು ತರಲಿದ್ದಾರೆ.
ಹಲವು ಅಡ್ಡಿ ಆತಂಕಗಳ ನಿವಾರಣೆ ಬಳಿಕ ಇದೀಗ ಹಂಪಿ ಉತ್ಸವ ನಡೆಯಲು ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಹಂಪಿ ಬೈಸ್ಕೈ, ಪಾರಂಪರಿಕ ನಡಿಗೆ, ಕುಸ್ತಿ, ಕುದುರೆ ಓಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಈ ಬಾರಿ ವಿಶೇಷವಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv