ಬೆಂಗಳೂರು: ನನ್ನ ಮಗ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ಆಗ್ತಿರೋದು ನಿಜ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಪಷ್ಟ ಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನಿಗೆ 45 ವರ್ಷ ಆಗಿದೆ. ಅವರ ದಾರಿ ಅವರು ಹುಡಿಕಿಕೊಂಡು ಹೋಗುತ್ತಾರೆ. ನನಗೆ 75 ವರ್ಷ ಆಗಿದೆ. ಈಗಲೂ ನನ್ನ ಮಾತು ಕೇಳು ಅಂದರೆ ಆಗುತ್ತಾ, ಮಕ್ಕಳಿಗೆ ಸ್ವಾತಂತ್ರ್ಯ ಕೊಡಲಿಲ್ಲ ಅಂದರೆ ಹೇಗೆ, ಅವನ ದಾರಿ ಅವನು ಹುಡುಕಿಕೊಂಡು ಹೋಗಿದ್ದಾರೆ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದರು.
ಕುಟುಂಬ ರಾಜಕಾರಣಕ್ಕೆ ವಿರೋಧ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳು, ಸೊಸೆ, ಮೊಮ್ಮಕ್ಕಳು ಎಲ್ಲರೂ ಇಲ್ಲವೇ. ಅದರ ಬಗ್ಗೆ ಯಾಕೆ ಯಾರು ಕೇಳುವುದಿಲ್ಲ. ಮಗ ಕಾಂಗ್ರೆಸ್ಗೆ ಹೋಗೋದು ಬೇರೆ, ನಾನು ಕಾಂಗ್ರೆಸ್ ನಡುವಳಿಕೆ ಟೀಕೆ ಮಾಡೋದು ಬೇರೆ. ನಾವು ಸುಡಗಾಡು ಸಿದ್ಧರು ಇದ್ದ ಹಾಗೆ. ಎಲ್ಲವನ್ನು ಹೇಳುತ್ತೇವೆ. ಕಾಂಗ್ರೆಸ್ ಆಗಿರಲಿ ಬಿಜೆಪಿ ಆಗಿರಲಿ ಎಲ್ಲದರ ನಡುವಳಿಕೆಗಳನ್ನು ಟೀಕೆ ಮಾಡುತ್ತೇವೆ. ಅದು ಬೇರೆ ಆತ ಕಾಂಗ್ರೆಸ್ಗೆ ಸೇರೋದು ಬೇರೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಟ್ವೀಟ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅವರು ತುಂಬಾ ಅವಸರದಲ್ಲಿ ಇದ್ದಾರೆ. ಸಿಎಂ ಆಗೇ ಬಿಟ್ಟೆ ಅಂತ ಇದ್ದಾರೆ. ದಾವಣಗೆರೆ ಸಮಾವೇಶ ಆದ ಮೇಲೆ ರಾಜ್ಯದ ಜನರಿಂದ ಮತದ ಡಬ್ಬ ನಮಗೆ ತುಂಬುತ್ತೆ ಅಂತ ಭ್ರಮೆಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ನಲ್ಲಿ ಕೆಲವರು ಮಂತ್ರಿಗಳು ಆಗಿ ಬಿಟ್ಟಿದ್ದಾರೆ. ಖಾತೆಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಏಕವಚನದಲ್ಲಿ ಮಾತಾಡುತ್ತಾರೆ. ದುಶ್ಯಾಸನ, ದುರ್ಯೋಧನನ ದುರಹಂಕಾರ ಜಾಸ್ತಿ ದಿನ ನಿಲ್ಲೊಲ್ಲ ಎಂದು ಟೀಕಿಸಿದರು.
ಸಿಎಂ ಬಗ್ಗೆ ಹೈಕಮಾಂಡ್ ಯೋಚನೆ ಮಾಡುತ್ತದೆ. ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಏನ್ ತೀರ್ಮಾನ ಮಾಡಿದರೂ, ನಾವು ಅದಕ್ಕೆ ಬದ್ಧವಾಗಿ ಇರುತ್ತೇವೆ. ಅಧಿಕೃತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಏನ್ ಕೆಲಸ ಮಾಡಬೇಕೋ ಅದನ್ನ ಮಾಡುತ್ತಿಲ್ಲ. ಮಳೆ ಹಾನಿ ಆಗ್ತಿದೆ. ಸಾವು, ನೋವು ಆಗ್ತಿದೆ. ಇದರ ಬಗ್ಗೆ ವಿಪಕ್ಷ ನಾಯಕರು ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ಬಿಡುಗಡೆಗೆ ವಿರೋಧ – ವಿಶೇಷ ಸಭೆ ಕರೆದ ಆರಗ ಜ್ಞಾನೇಂದ್ರ
ವಿರೋಧ ಪಕ್ಷದ ನಾಯಕರು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಅಂದ್ರೆ ಮುಖ್ಯಮಂತ್ರಿಯ ಛಾಯೆ. ನಿಮ್ಮ ಜವಾಬ್ದಾರಿ ನೀವು ನಿಭಾಯಿಸಬೇಕು. ನಿಮ್ಮ ಜವಾಬ್ದಾರಿ ನಿಭಾಯಿಸದೆ, ಬೇರೆ ಅವರ ಜವಾಬ್ದಾರಿ ಬಗ್ಗೆ ಟೀಕೆ ಯಾಕೆ ಮಾಡ್ತೀರಾ. ಮೊದಲು ನಿಮ್ಮ ಕೆಲಸ ನೀವು ಮಾಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ