ಮೈಸೂರು: ಬರೋಬ್ಬರಿ ಒಂದು ತಿಂಗಳ ನಂತರ ಜಿಲ್ಲೆಯ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್. ವಿಶ್ವನಾಥ್ ಮೈಸೂರಿಗೆ ಆಗಮಿಸಿದ್ದಾರೆ.
ಒಂದು ತಿಂಗಳ ನಂತರ ಎಚ್. ವಿಶ್ವನಾಥ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಭಾನುವಾರ ಹುಣಸೂರು ಕ್ಷೇತ್ರಕ್ಕೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ 10.30ಕ್ಕೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಅವರು, ತಾವು ಯಾಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಎಂಬುದ್ದಕ್ಕೆ ಸ್ಪಷ್ಟನೆ ನೀಡಲಿದ್ದಾರೆ. ಅಷ್ಟೇ ಅಲ್ಲದೇ ನಾಳೆ ಮಧ್ಯಾಹ್ನ ಹುಣಸೂರಿಗೆ ತೆರಳಿ ಅಲ್ಲಿ ಮತದಾರರ ಜೊತೆ ಸಭೆ ಮಾಡಲಿದ್ದಾರೆ.
ಶುಕ್ರವಾರ ವಿಶ್ವನಾಥ್ ಅವರು ಜೆಡಿಎಸ್ನಿಂದ ಉಚ್ಛಾಟನೆ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿ, ಪ್ರಪಂಚ ವಿಶಾಲವಾಗಿದೆ. ಅತೃಪ್ತ ಶಾಸಕರೇ ಸೇರಿ ಒಂದು ಪಕ್ಷವನ್ನು ಕಟ್ಟಿದರೆ ಆಗುತ್ತೆ ಬಿಡಿ. ಹೊಸ ಪಕ್ಷ ಕಟ್ಟಬೇಕಿದೆ. ನಾನು ಚುನಾವಣೆಯಿಂದ ದೂರ ಉಳಿಯಲು ನಿರ್ಧಸಿದ್ದೇನೆ. ಆದರೆ ಇದು ರಾಜಕೀಯ ನಿವೃತ್ತಿಯಲ್ಲ ಎಂದು ನಗೆ ಬೀರಿದ್ದರು.
ಬಿಜೆಪಿ ಸೇರುವ ವಿಚಾರವನ್ನು ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ್ದರೆ. ಆದರೆ ಈ ಬಗ್ಗೆ ಅವರನ್ನೇ ಪ್ರಶ್ನಿಸಬೇಕು. ನನಗೆ ಯಾಕೆ ಪ್ರಶ್ನೆ ಮಾಡುತ್ತೀರಾ? ನಾನು ಬಿಜೆಪಿ ಸೇರುವ ಬಗ್ಗೆ ವಿಚಾರ ಮಾಡಿಲ್ಲ. ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಯಾರನ್ನು ನಿಲ್ಲಿಸುತ್ತೋ ನನಗೂ ಗೊತ್ತಿಲ್ಲ ಎಂದು ಹೇಳಿದ್ದರು.