ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಯಾವ ಸರ್ಕಾರ ಬಂದರೂ ಹೈಲೈಟ್ ಆಗ್ತಾ ಇರ್ತಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲೂ ರೇವಣ್ಣ ಕೆಲಸಗಳು ಆಗ್ತಿದ್ದವಂತೆ. ಈಗ ಯಡಿಯೂರಪ್ಪ ಸರ್ಕಾರದಲ್ಲೂ ಕೆಲಸಗಳು ಆಗ್ತಿವೆ ಅನ್ನೋ ಚರ್ಚೆ ಇವತ್ತು ನಡೆಯಿತು. ಈ ಮಾತನ್ನ ಹೇಳಿದ್ದು ಬೇರೆ ಯಾರು ಅಲ್ಲ, ಜೆಡಿಎಸ್ ಶಾಸಕರೇ ಹೀಗೆ ಹೇಳಿದ್ದು ವಿಶೇಷ.
ಅಂದಹಾಗೆ ವಿಧಾನಸಭೆಯ ಸಭಾಂಗಣದಲ್ಲಿ ಇವತ್ತು ಮಾಧ್ಯಮ ಗ್ಯಾಲರಿ ಮುಂದೆ ಹೆಚ್.ಡಿ.ರೇವಣ್ಣ ಬಂದು ನಿಂತು ಮಾತಾಡುತ್ತಿದ್ದರು. ಆಗ ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಪುಟ್ಟರಾಜು, ಹೆಚ್.ಕೆ.ಕುಮಾರಸ್ವಾಮಿ ಆಗಮಿಸಿದರು. ಇವತ್ತು ಯಡಿಯೂರಪ್ಪ ರೇವಣ್ಣನವರನ್ನ ಕರೆದು ಮಾತಾಡಿಸಿದ್ದಾರೆ, ಅವರ ಕೆಲಸ ಆಗ್ತಿವೆ ಬಿಡಿ ಅಂದ್ರು ಶಿವಲಿಂಗೇಗೌಡ. ಆಗ ಅಂಯ್ಯೋ ಸುಮ್ನೆ ಇರಣ್ಣ, ನಮ್ ಕೆಲಸಗಳು ಆಗ್ತಿಲ್ಲ ಅಂತಾ ರೇವಣ್ಣ ನಕ್ಕರು. ಆಗ ತಕ್ಷಣ ರಿಯಾಕ್ಟ್ ಮಾಡಿದ ಪುಟ್ಟರಾಜು, ಅಣ್ಣ ಕೊಡಣ್ಣ ಯಾವ ಕೆಲಸ ಆಗಿಲ್ಲ, ನಾನೇ ಸಿಎಂ ಹತ್ತಿರ ಹೋಗಿ ಸಹಿ ಮಾಡಿಸಿಕೊಂಡು ಬರ್ತೀನಿ ಅಂತಾ ಕೇಳಿದರು.
ಇನ್ನು ಇದೇ ವೇಳೆ ಹೆಚ್.ಕೆ.ಕುಮಾರಸ್ವಾಮಿ ಅಯ್ಯೋ ಸುಮ್ನಿರಿ, ಅವರ ಕೆಲಸ ಚೆನ್ನಾಗಿಯೇ ಆಗ್ತಿವೆ. ನಮ್ ಕೆಲಸ ಆಗ್ತಿಲ್ಲ. ಆ ಸರ್ಕಾರದಲ್ಲೂ ಆಗ್ಲಿಲ್ಲ, ಈಗಲೂ ಆಗ್ತಿಲ್ಲ. ಎಷ್ಟು ಕೆಲಸಗಳು ಹಂಗೆ ಇವೆ ಅಂತಾ ಗೊಣಗಿಕೊಂಡು ಹೋದರು. ಇದರ ಬೆನ್ನಲ್ಲೇ ಅಯ್ಯೋ ಬಾರಣ್ಣ ಸುಮ್ನೆ ಮಾತೇಕೆ ಅಂತಾ ಶಿವಲಿಂಗೇಗೌಡರನ್ನ ಕರೆದುಕೊಂಡು ಪುಟ್ಟರಾಜು ಹೊರನಡೆದ್ರು. ಕಡೆಗೆ ಇದ್ದ ರೇವಣ್ಣ ಅಯ್ಯೋ ಸುಮ್ನಿರಿ ಅವರು ಹಂಗೆ ಹೇಳ್ತಾರೆ ಅಂತಾ ಸ್ಮೈಲ್ ಕೊಟ್ಟು, ತಮ್ಮ ಸೀಟಿಗೆ ಹೋದರು.