ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮದ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುಗಳಿಗೆ 111 ವರ್ಷವಾಗಿದೆ. ಈ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. 89 ವರ್ಷಗಳಿಂದ ಅವರು ಸಿದ್ದಗಂಗಾ ಪೀಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಹಾಗೂ ಅನ್ನ ದಾಸೋಹ ಮಾಡಿ ಪ್ರಪಂಚದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಹಲವಾರು ರೀತಿ ಧಾರ್ಮಿಕ ಉಪನ್ಯಾಸ ಮಾಡಿದ್ದಾರೆ ಎಂದು ನಡೆದಾಡುವ ದೇವರ ಕೆಲಸವನ್ನು ಶ್ಲಾಘಿಸಿದರು. ಇದನ್ನೂ ಓದಿ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು
ಶ್ರೀಗಳು ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡಲು ಅವರಿಗೆ ದೈವದ ಅನುಗ್ರಹವಿದೆ. ಹಾಗಾಗಿ ಅವರು ನಡೆದಾಡುವ ದೇವರು ಎನ್ನುವ ಬಿರುದಿಗೆ ಭಾಜನರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾದರೂ ಭಗವಂತನ ಅನುಗ್ರಹದಿಂದ ಜಯಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಉತ್ತರಾಯಣ ಪುಣ್ಯಕಾಲ ಶುರುವಾಗಿದೆ ಇನ್ನು 6 ತಿಂಗಳ ಕಾಲ ಇದೆ ಪುಣ್ಯ ಕಾಲ ಇರುತ್ತದೆ. ನಾವು ಹಲವಾರು ಬಾರಿ ಶ್ರೀಗಳ ಜೊತೆ ಕುಳಿತು ಊಟ ಮಾಡಿದ್ದೇವೆ. ಅದು ನನ್ನ ಪುಣ್ಯ. ಈ ಪುಣ್ಯಕಾಲದಲ್ಲಿ ನಡೆದಾಡುವ ದೇವರ ದರ್ಶನ ಮಾಡಲು ಬಂದಿದ್ದು ದರ್ಶನ ಸಿಕ್ಕಿದೆ. ಭಗವಂತ ಯಾವಾಗ ತೀರ್ಮಾನ ಮಾಡುತ್ತಾನೋ ನಮಗೆ ಗೊತ್ತಿಲ್ಲ. ಇನ್ನೂ ಶ್ರೀಗಳಿಗೆ ಉಸಿರಾಡುವ ಶಕ್ತಿ ಇದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಶ್ರೀಗಳ ಬಿಪಿ ಶುಗರ್ ಎಲ್ಲವೂ ಸರಿಯಾಗಿದೆ ಅಂತ ದೇವೇಗೌಡರು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv