ಹಾಸನ: ವಿಧಾನಸಭಾ ಕ್ಷೇತ್ರದ ಟಿಕೆಟ್ ದಂಗಲ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು (H.D.Devegowda) ಎಂಟ್ರಿ ಕೊಟ್ಟಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕರೆದಿದ್ದ ಸಭೆ ದಿಢೀರ್ ಮುಂದೂಡಿಕೆಯಾಗಿದ್ದು, ಟಿಕೆಟ್ ಹಂಚಿಕೆ ಮತ್ತಷ್ಟು ಕಗ್ಗಂಟಾಗಿದೆ. ದೇವೇಗೌಡರ ಎಂಟ್ರಿಯಿಂದ ಸ್ವರೂಪ್ ಬೆಂಬಲಿಗರಲ್ಲಿ ಆತಂಕ ಶುರುವಾಗಿದ್ದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ. ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ.
ತಣ್ಣಗಿದ್ದ ಹಾಸನ (Hassan) ವಿಧಾನಸಭಾ ಕ್ಷೇತ್ರಕ್ಕೆ ದೊಡ್ಡಗೌಡರ ಸೊಸೆ ಭವಾನಿ ರೇವಣ್ಣ (Bhavani Revanna) ಎಂಟ್ರಿಯಾಗುತ್ತಿದ್ದಂತೆ ಎರಡು ಬಣಗಳು ಸೃಷ್ಟಿಯಾಗಿ ನಾನಾ ನೀನಾ ಎಂಬ ಹಠ ಎದುರಾಗಿದೆ. ಕೊನೆಗೆ ಇದಕ್ಕೆಲ್ಲಾ ತೆರೆ ಎಳೆಯಲು ಕುಮಾರಸ್ವಾಮಿ ಮುಂದಾಗಿದ್ದರು. ಆದರೆ ಟಿಕೆಟ್ ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿರುವ ಹೆಚ್.ಡಿ.ರೇವಣ್ಣ (H.D.Revanna) ಕುಟುಂಬ ಹೆಚ್ಡಿಕೆ ಹಾಗೂ ಹೆಚ್ಡಿಡಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನೂ ಓದಿ: ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ
ಭವಾನಿ ರೇವಣ್ಣಗೆ ಟಿಕೆಟ್ ಇಲ್ಲಾ ಎಂದು ಪದೇ ಪದೇ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿರುವ ನಡುವೆಯೂ ಭವಾನಿ ರೇವಣ್ಣ ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ಜೊತೆ ಕಳೆದ ಮೂರು ದಿನಗಳಿಂದ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ ಹೆಚ್ಡಿಕೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿ ಭಾನುವಾರ ಬೆಂಗಳೂರಿನ ಜೆ.ಪಿ. ಭವನದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಆಯ್ದ ಮುಖಂಡರ ಸಭೆ ಮುಂದೂಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಟಿಕೆಟ್ ಯಾರಿಗೆ ಎಂಬುದು ಕೂತುಹಲ ಮೂಡಿಸಿದೆ. ದೇವೇಗೌಡರು ಎಂಟ್ರಿ ಆಗಿರುವ ಕಾರಣ ರೇವಣ್ಣ ಅವರ ಒತ್ತಡಕ್ಕೆ ಮಣಿಯುತ್ತಾರಾ, ಇಲ್ಲವೇ ಕುಮಾರಸ್ವಾಮಿ ಪರ ನಿಂತು ಸ್ವರೂಪ್ ನಿಲ್ಲುತ್ತಾರಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಸ್ವರೂಪ್ ಬೆಂಬಲಿಗರು ಪಕ್ಷಾಂತರ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಸ್ವರೂಪ್ಗೆ ಟಿಕೆಟ್ ಕೊಟ್ಟರೆ ಭವಾನಿ ಬೆಂಬಲಿಗರು ಸಿಟ್ಟಾಗಿ ತಟಸ್ಥವಾಗಲಿದ್ದಾರೆ. ಇದನ್ನೂ ಓದಿ: ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಹೆಚ್ಡಿಕೆ ಮಾಸ್ಟರ್ ಪ್ಲಾನ್