ಕಲಬುರಗಿ: ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಇನ್ನೂ ಶಕ್ತಿ ತುಂಬಬೇಕು. 2023 ಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ನವರು ಜೆಡಿಎಸ್ ಪಕ್ಷವನ್ನ ಸಂಪೂರ್ಣ ನಾಶ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಕ್ಕೆ ಶಕ್ತಿ ಕಡಿಮೆ ಇದೆ. ಕಾಂಗ್ರೆಸ್ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇದೆ. 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಬೆಳೆಯುತ್ತೆ ಅನ್ನೋದು ಹೇಳೋಕೆ ಆಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಈಗ ಯಾವ ರಾಜ್ಯದಲ್ಲಿಯೂ ಇಲ್ಲ. ಇದಕ್ಕೆ ಕಾರಣ ಯಾರು ಅಂತಾ ಅವರೇ ಹುಡುಕಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ
ಇವತ್ತು ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ. ಯಾಕೆಂದರೆ ಬಿಜೆಪಿ ಪಕ್ಷದಲ್ಲಿದ್ದವರು ಮೋದಿ ಹೆಸರಿನಲ್ಲೇ ಚುನಾವಣೆ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಮೋದಿ ಪಾರ್ಟಿ ಅಂತಾ ಕರೆಯುತ್ತೇನೆ. ಒಬ್ಬ ವ್ಯಕ್ತಿಯ ಸಕ್ಸಸ್ ನಲ್ಲಿ ಪಾರ್ಟಿ ನಡೆಯುತ್ತಿದೆ. ಆದರೆ ಮುಂದೇನು ಆಗುತ್ತೋ ಅದು ನನಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಜೆಡಿಎಸ್ನ ಪಂಚರತ್ನ ಕಾರ್ಯಕ್ರಮ ಎಲ್ಲರ ಒಳ್ಳೆಯದಕ್ಕಾಗಿ ರೂಪಿಸಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿರುವ ಭಾಗ್ಯ ಯೋಜನೆಗಳಿಗೆ ಟಚ್ ಮಾಡಬಾರದು ಅಂತಾ ಹೇಳಿದ್ದರು. ಈ ಯೋಜನೆಗಳಿಗೂ ಹಣ ಒದಗಿಸಿ ಸಾಲಮನ್ನಾ ಮಾಡಿದ್ದರು ಎಂದರು.
ರಾಮನಗರದಲ್ಲಿ ಬಿಜೆಪಿ ಸಚಿವ ಹಾಗೂ ಕಾಂಗ್ರೆಸ್ ಸಂಸದರ ಜಟಾಪಟಿ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಎರಡು ರಾಷ್ಟ್ರೀಯ ಪಕ್ಷಗಳು ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಹೇಳಿದರು.
ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರಿಂಕೋರ್ಟ್ ನಲ್ಲಿ ಈ ಕುರಿತು ದಿನಾಂಕ ನಿಗದಿ ಮಾಡಿದ್ದಾರೆ ಅಂತಾ ಕೇಳಿದ್ದೀನಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಪ್ರಾವಿಜನಲ್ ಕ್ಲಿಯರೆನ್ಸ್ ಮಾಡಿದ್ದರು. ಅದಾದ ಮೇಲೆ ತಮಿಳುನಾಡಿನವರು ಖ್ಯಾತೆ ತೆಗೆದಿದ್ದರು. ನಾಲ್ಕು ರಾಜ್ಯಗಳ ನೀಲುವು ತೆಗೆದುಕೊಂಡು ಅಂತಿಮ ಜಡ್ಜ್ಮೆಂಟ್ ಬರಲಿ. ಅದು ಏನು ಬರುತ್ತೆ ಅನ್ನೋದು ಗೊತ್ತಿಲ್ಲ ಎಂದು ನುಡಿದರು.
ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ನ ಪಾದಯಾತ್ರೆ ಹೋರಾಟ ಎಷ್ಟು ಯಶಸ್ವಿಯಾಗುತ್ತೋ ಗೊತ್ತಿಲ್ಲ. ಈ ಹೋರಾಟದಲ್ಲಿ ಬಿಜೆಪಿಯವರು ಕಾಂಗ್ರೆಸ್ ಮುಗಿಸಬೇಕು ಅಂತಾ ನಿಂತಿದ್ದಾರೆ. ಕಾಂಗ್ರೆಸ್ ಕಳೆದು ಹೋಗಿರುವ ವರ್ಚಸ್ಸು ಬೆಳೆಸಬೇಕು ಅಂತಾ ನಿಂತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದಾಗ ಏನ್ ಆಯ್ತು? ನಾವು ಬಿಜೆಪಿಯ ಬಿ ಟೀಮ್ ಅಂತಾ ಆರು ತಿಂಗಳ ಕಾಲ ಹೇಳಿದ್ದರು. 130 ಕ್ಕಿದ್ದ ಕಾಂಗ್ರೆಸ್ ಈಗ 78 ಕ್ಕೆ ಬಂತು ನಿಂತಿದೆ. ಇವರ ಹೋರಾಟದಿಂದ ಫಲ ಸಿಗುತ್ತದೆ ಅಂದರೆ ಅದಷ್ಟು ಸುಲಭವಲ್ಲ. ಜೆಡಿಎಸ್ಗೂ 20% ಮತಗಳು ಇವೆ. 2024 ರಲ್ಲಿ ಲೋಕಸಭೆಯಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಕಷ್ಟ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಳ ಸ್ಟ್ರಾಂಗ್ ಲೀಡರ್ ಇದ್ದು, ಮೈನಸ್ ಕಾಂಗ್ರೆಸ್ ನಾವು ಮಾಡಬೇಕು ಅಂತಾ ಹೇಳುತ್ತಾರೆ ಎಂದು ನುಡಿದರು. ಇದನ್ನೂ ಓದಿ: ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್
ಮಲ್ಲಿಕಾರ್ಜುನ ಖರ್ಗೆಯವರು ಮೊದಲ ಬಾರಿಗೆ ಲೋಕಸಭೆಯಲ್ಲಿ ಗೆಲ್ಲಲಿಲ್ಲ. ಹಾಗಾಗಿ ಕಾಂಗ್ರೆಸ್ ಸ್ಥಿತಿಗತಿ ಏನಿದೆ ಅಂತಾ ಯೋಚನೆ ಮಾಡಲಿ ಎಂದರು.