ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ವೀಡಿಯೋ ಸರ್ವೆ ವೇಳೆ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಐದು ಮಂದಿ ಹಿಂದೂ ಮಹಿಳೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಅರ್ಹವೇ ಎನ್ನುವ ಬಗ್ಗೆ ಮೊದಲು ವಿಚಾರಣೆ ನಡೆಸಲಾಗುವುದು. ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಜಿಲ್ಲಾ ನ್ಯಾಯಧೀಶ ಅಜಯ್ ಕೃಷ್ಣ ವಿಶ್ವೇಶ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಯ್ ಕೃಷ್ಣ ಅವರು ಇಂದು ಆದೇಶ ನೀಡಿದ್ದು, ಮೇ 26 ರಿಂದ ಮಸೀದಿ ಪರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲಾಗುವುದು. ಅದಕ್ಕೂ ಮುನ್ನ ಏಳು ದಿನಗಳೊಳಗೆ ವೀಡಿಯೋಗ್ರಫಿ ಸರ್ವೆಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ವಿಚಾರಣೆ ಬಳಿಕ ವೀಡಿಯೋಗ್ರಫಿ ಸರ್ವೆ ಆಧರಿಸಿ ವಿಚಾರಣೆ ಮುಂದುವರಿಸುವ ಬಗ್ಗೆ ಕೋರ್ಟ್ ತೀರ್ಮಾನಿಸುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ಪವರ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಉಡುಪಿಯ ಅಕ್ಷತಾ
ಶಿವಲಿಂಗ ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ಸಲ್ಲಿರುವ ಅರ್ಜಿ 1991ರ ಕಾಯಿದೆ ಮತ್ತು ಆದೇಶ 7, ನಿಯಮ 11 ಉಲ್ಲಂಘಿಸುತ್ತದೆ. ಹೀಗಾಗಿ ಇಡೀ ಪ್ರಕರಣವನ್ನು ವಜಾ ಮಾಡಬೇಕು ಎಂದು ಮಸೀದಿ ಪರ ಅರ್ಜಿದಾರರು ವಾದ ಮಂಡಿಸಿದ್ದರು.
ಇದಕ್ಕೆ ಪ್ರತಿವಾದ ಸಲ್ಲಿಸಿದ್ದ ಐವರು ಮಹಿಳೆಯರು ಮತ್ತು ಹಿಂದೂ ಸೇನಾ ಪರ ವಕೀಲರು, ಮಸೀದಿ ದೇವಸ್ಥಾನಕ್ಕೆ ಸೇರಿದ್ದು, ಇದನ್ನು ಅತಿಕ್ರಮಣ ಮಾಡಿಕೊಂಡು ಮಸೀದಿ ನಿರ್ಮಿಸಲಾಗಿದೆ. ಈಗ ಶಿವಲಿಂಗ ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ ಸರ್ವೆ ವೇಳೆ ಮಸೀದಿಯ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.
ರಾಮಮಂದಿರ ವಿವಾದ ಉತ್ತುಂಗದ ವೇಳೆ, 1991ರಲ್ಲಿ ಪೂಜಾ ಸ್ಥಳಗಳ ನಿರ್ಬಂಧ ಕಾಯ್ದೆ ಜಾರಿ ಮಾಡಲಾಗಿತ್ತು. ಅದರಲ್ಲಿ ಸ್ವಾತಂತ್ರ್ಯದ ನಂತರದ ದಿನಾಂಕದಿಂದ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಬದಲಾಯಿಸುವುದು ಅಥವಾ ಅದರ ರಚನೆಗೆ ಧಕ್ಕೆ ಮಾಡುವಂತಿಲ್ಲ. ಅದು ಇದ್ದಂತಯೇ ಮುಂದುವರಿಸಬೇಕು ಎಂದು ನಿಯಮ ರೂಪಿಸಲಾಗಿತ್ತು. ಇದನ್ನೂ ಓದಿ: ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್
ಇದೇ ಅಂಶವನ್ನು ಮುಂದಿಟ್ಟುಕೊಂಡು ಈಗ ಮಸೀದಿ ಆಡಳಿತ ಮಂಡಳಿ ಕಾನೂನು ಹೋರಾಟ ಮಾಡುತ್ತಿದೆ. 1991ರ ಕಾಯಿದೆ ಅನ್ವಯ ಇಡೀ ಪ್ರಕರಣವೇ ವಿಚಾರಣೆಗೆ ಯೋಗ್ಯವಲ್ಲ ಎಂದು ಕೋರ್ಟ್ನಲ್ಲಿ ವಾದ ಮಂಡಿಸಿದೆ. ಆದರೆ ರಾಮಮಂದಿರ ರೀತಿಯಲ್ಲೇ ಈ ಪ್ರಕರಣವನ್ನು ಪರಿಗಣಿಸಲು ಹಿಂದೂ ಪರ ವಕೀಲರು ಮನವಿ ಮಾಡುತ್ತಿದ್ದಾರೆ.