ಚಿಕ್ಕಮಗಳೂರು: ರಾಜ್ಯದಲ್ಲಿ ನಕ್ಸಲರ ಯುಗಾಂತ್ಯವಾದ ಬೆನ್ನಲ್ಲೇ ಶೃಂಗೇರಿ ಅರಣ್ಯ ಪ್ರದೇಶದಲ್ಲಿ ಬಂದೂಕು ಪತ್ತೆಯಾಗಿದೆ.
ಶೃಂಗೇರಿ (Sringeri) ತಾಲೂಕಿನ ಮರ್ಕಲ್ ಗ್ರಾಮದ ತಿರುಗುಣಿಬೈಲು ಅರಣ್ಯ ಪ್ರದೇಶದಲ್ಲಿ ಎಸ್.ಬಿ.ಎ.ಎಲ್ ಬಂದೂಕು ಪತ್ತೆಯಾಗಿದೆ. ಈ ಬಂದೂಕು ಶರಣಾಗತ ನಕ್ಸಲ್ (Naxal) ರವೀಂದ್ರನಿಗೆ ಸೇರಿದ್ದು ಎನ್ನಲಾಗುತ್ತಿದೆ.
ಮಣ್ಣಿನಡಿಯಲ್ಲಿ ಹೂತಿಟ್ಟಿದ್ದ ಬಂದೂಕು ಹಾಗೂ ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ತೆಯಾಗಿರುವ ಬಂದೂಕು ಹಾಗೂ ಜೀವಂತ ಗುಂಡುಗಳು ಅಪರಿಚಿತರದ್ದು ಎಂದು ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರು ಜನ ನಕ್ಸಲರು ಶರಣಾದಾಗಲೂ ಸಿಕ್ಕ ಬಂದೂಕಿಗಳಿಗೂ ಸಹ ಪೊಲೀಸರು ಅಪರಿಚಿತರ ಹಣೆಪಟ್ಟಿ ಕಟ್ಟಿದ್ದರು. ಶರಣಾದ ನಕ್ಸಲರನ್ನ ಕಾನೂನಿನ ಕುಣಿಕೆಯಿಂದ ತಪ್ಪಿಸಲು ಅಪರಿಚಿತರ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ರಾಜ್ಯದಲ್ಲಿ ಕೊನೆಯ ನಕ್ಸಲ್ ಎನಿಸಿಕೊಂಡಿದ್ದ ರವೀಂದ್ರ ಫೆ.1ರಂದು ಎಸ್ಪಿ ಕಚೇರಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರ ಸಮ್ಮುಖದಲ್ಲಿ ಶರಣಾಗಿದ್ದ. ಈ ಮೂಲಕ ಕರ್ನಾಟಕದಲ್ಲಿ ನಕ್ಸಲರ ಯುಗಾಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.