ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಸರಿಸಾಟಿಯಾದ ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮುಖ್ಯಮಂತ್ರಿ ಬಿಜೆಪಿಯ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಉತ್ತರಪ್ರಡೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಜಯಭೇರಿ ಬಾರಿಸಿದ ನಂತರ ಉತ್ಸಾಹದಲ್ಲಿರುವ ಗುಜರಾತ್ ಮುಖ್ಯಮಂತ್ರಿ ಬಿಜೆಪಿಯ ಭೂಪೇಂದ್ರ ಪಟೇಲ್ ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಸರಿಸಾಟಿಯಾಗಿ ಪ್ರತಿಸ್ಪರ್ಧಿಗಳೇ ಇಲ್ಲ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಿಚ್ಚಳ ಗೆಲುವು ದಾಖಲಿಸಲಿದೆ. 5 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ 4 ರಾಜ್ಯಗಳನ್ನು ಗೆದ್ದುಕೊಂಡಿರುವ ಬಿಜೆಪಿ ಗುಜರಾತ್ ಮೇಲೆ ದೃಷ್ಟಿ ನೆಟ್ಟಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಘೋಷಿಸಿರುವ ಯೋಜನೆಗಳು ಸಮರ್ಥವಾಗಿ ಜನರನ್ನು ತಲುಪಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಜನಪರ ಕೆಲಸಗಳಿಂದಾಗಿ ಜನರು ಬಿಜೆಪಿ ಸರ್ಕಾರದ ಜೊತೆಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ
ನಾವು ಅಭಿವೃದ್ಧಿ ಮಾಡಿದ್ದೇವೆ ಎಂಬುದು ಜನರಿಗೆ ಇದು ಚೆನ್ನಾಗಿ ತಿಳಿದಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯವಾಗಲಿ ಅಥವಾ ಇತರ ತುರ್ತು ಸಮಸ್ಯೆಗಳಾಗಲಿ, ಜನರೊಂದಿಗೆ ನಿಂತ ಏಕೈಕ ಪಕ್ಷ ಬಿಜೆಪಿ. ವಾಸ್ತವವೆಂದರೆ ನಾವು ಯಾವುದೇ ಸವಾಲನ್ನು ನಿರೀಕ್ಷಿಸುವುದಿಲ್ಲ. ನಾವು ಕೆಲಸ ಮಾಡುವಾಗ, ಚುನಾವಣಾ ಫಲಿತಾಂಶಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
2021 ರಲ್ಲಿ ನಾನು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ, ಗಾಂಧಿನಗರ ಮುನ್ಸಿಪಲ್ ಕಾರ್ಪೋರೆಷನ್ ಚುನಾವಣೆಯಲ್ಲಿ ಎಎಪಿ ಗೆಲ್ಲುತ್ತದೆ ಎಂದು ಊಹಿಸಲಾಗಿತ್ತು. ಆದರೆ ಆಗ ಏನಾಯಿತು? 44 ಸ್ಥಾನಗಳಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದಿದೆ. ಅದು ನಾವು ಜನರಿಗಾಗಿ ಮಾಡಿದ ಕೆಲಸಗಳ ಫಲ. ಪ್ರಜಾಪ್ರಭುತ್ವದಲ್ಲಿ, ಯಾವುದೇ ಪಕ್ಷವು ಚುನಾವಣೆಯಲ್ಲಿ ಹೋರಾಡಲು ಎಲ್ಲಿ ಬೇಕಾದರೂ ಹೋಗಬಹುದು. ಆದರೆ ರಾಜ್ಯದ ಜನರ ಸಾಮೂಹಿಕ ಬುದ್ಧಿವಂತಿಕೆಯು ಫಲಿತಾಂಶಗಳನ್ನು ನಿರ್ಧರಿಸುತ್ತದೆ ಎಂದಿದ್ಧಾರೆ.