ಬೆಂಗಳೂರು: ಗ್ಯಾರಂಟಿಗಳ (Congress Guarantee) ವಿಚಾರವಾಗಿ ಸರ್ಕಾರದ ಮಟ್ಟದಲ್ಲೇ ಎದ್ದಿರುವ ಭಿನ್ನಸ್ವರದ ಜೊತೆಗೆ ಗ್ಯಾರಂಟಿಗಳ ಮುಂದುವರಿಕೆ ಅನುಮಾನ ಎಂದು ವಿಪಕ್ಷಗಳು ಹೇಳುತ್ತಿರುವುದು ಜನರನ್ನು ಗೊಂದಲಕ್ಕೆ ತಳ್ಳಿದೆ. ಈ ನಡುವೆಯೂ ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎನ್ನುತ್ತಾ ಹಲವು ಸಚಿವರು ಗ್ಯಾರಂಟಿಗಳ ಮಾನದಂಡದಲ್ಲಿ ಬದಲಾವಣೆ ಆಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ 25,000 ಕೋಟಿ ರೂ. ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಅಕ್ಟೋಬರ್ ಹೊತ್ತಿಗೆ ಆಪರೇಷನ್ ಬಿಪಿಎಲ್ ಕಾರ್ಡ್ಗೆ (Operation BPL Card) ಚಾಲನೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ಗಳ ಪರಿಶೀಲನೆ ನಡೆದರೆ ಅನರ್ಹ ಫಲಾನುಭವಿಗಳು ಪತ್ತೆಯಾಗುತ್ತಾರೆ. ಹೀಗೆ ಮಾಡಿದ್ದಲ್ಲಿ ಅನರ್ಹರು ಸಹಜವಾಗಿಯೇ ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯಬೇಕಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.
ರಾಜ್ಯದಲ್ಲಿ 14 ಲಕ್ಷಕ್ಕೂ ಹೆಚ್ಚು ಅಕ್ರಮ ಬಿಪಿಎಲ್ ಕಾರ್ಡ್ ಇದೆ ಎನ್ನಲಾಗುತ್ತಿದೆ. ಅಕ್ರಮ ಪತ್ತೆಯಾದರೆ ಮೊದಲ ಹಂತದಲ್ಲಿ 6 ತಿಂಗಳು ಕಾರ್ಡ್ ಅಮಾನತು ಮಾಡಲಾಗುತ್ತದೆ.
ಇದೀಗ ಅನರ್ಹ, ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲು ಮುಂದಾಗಿದೆ. ಕಾರ್ಡ್ದಾರರ ಹೆಸರಲ್ಲಿ ವಾಹನ ಇವೆಯಾ ಎಂಬುದನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ, ಜಮೀನು ಎಷ್ಟಿದೆ ಎಂಬುದನ್ನು ತಿಳಿಯಲು ಕಂದಾಯ ಇಲಾಖೆ, ತೆರಿಗೆ ಪಾವತಿದಾರರಾ ಎಂಬುದನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಯ ನೆರವು ಪಡೆಯಲು ಆಹಾರ ಇಲಾಖೆ ಸಜ್ಜಾಗುತ್ತಿದೆ. ಇದನ್ನೂ ಓದಿ: ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಮನವಿ – ಸಚಿವರಿಗೆ ಹೀಗಾದ್ರೆ ಸಾಮಾನ್ಯರ ಕತೆ ಏನು?
ಯಾರ ಕಾರ್ಡ್ ರದ್ದಾಗಬಹುದು?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ವೈಟ್ ಬೋರ್ಡ್ 4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಮಾಡಿಸಿದವರ ಕಾರ್ಡ್ ರದ್ದಾಗಲಿದೆ.