ಮಡಿಕೇರಿ: ಮಹಾಮಳೆಗೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯೊಬ್ಬರನ್ನು ಸಿವಿಲ್ ಡಿಫೆನ್ಸ್ ತಂಡ ರಕ್ಷಣೆ ಮಾಡಿರುವ ಘಟನೆ ಹೆಬ್ಬೆಟ್ಟಗಿರಿಯಲ್ಲಿ ನಡೆದಿದೆ.
ಕುಂಭದ್ರೋಣ ಮಳೆಗೆ ಗುಡ್ಡ ಕುಸಿತ ಸಂಭವಿಸಿ ನಿರಾಶ್ರಿತರಾದ ಕುಟುಂಬ ಅನಿವಾರ್ಯವಾಗಿ ಮನೆ ತೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವೇಳೆ ಮನೆಯಲ್ಲಿ 85 ವರ್ಷದ ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ಕುಟುಂಬಸ್ಥರು ಅವರನ್ನು ಹೊತ್ತು ತರಲಾಗದೇ ಮನೆಯಲ್ಲೇ ಬಿಟ್ಟು ಬಂದಿದ್ದರು.
ಹೆಬ್ಬೆಟ್ಟಗಿರಿಯ ಪಕ್ಕದ ಎಲ್ಲಾ ಗ್ರಾಮಗಳಲ್ಲೂ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಈ ವೇಳೆ ಮೊಮ್ಮಗ ಪವನ್ ಅಜ್ಜಿಯನ್ನ ಬಿಟ್ಟು ಬಂದಿರುವ ವಿಚಾರವನ್ನು ಎಸ್ಪಿ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚತ್ತ ಎಸ್ಪಿ ರಕ್ಷಣಾ ಕಾರ್ಯ ನಡೆಸುತ್ತಿದ್ದ ಸಿವಿಲ್ ಡಿಫೆನ್ಸ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದು ಮನೆಗೆ ತೆರಳಿದಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದ ಅಜ್ಜಿ ಮಂಚದ ಮೇಲೆ ಮಲಗಿದ್ದರು. ಜೀವಂತವಾಗಿರುವುದನ್ನು ಕಂಡ ರಕ್ಷಣಾ ಪಡೆ ಯೋಧರು ಅಜ್ಜಿಯನ್ನು 10 ಕಿಮೀ ದೂರ ಹೊತ್ತು ತಂದು ರಕ್ಷಿಸಿದ್ದಾರೆ.
ಇತ್ತ ಅಜ್ಜಿಯ ಜೀವ ಉಳಿಸಲು ಪಣತೊಟ್ಟ 12 ಮಂದಿ ಸ್ವಯಂ ಸೇವರ ರಕ್ಷಣಾ ಕಾರ್ಯಾಚರಣೆ ತಂಡ ಸವಾಲು ಸ್ವೀಕರಿಸಿ ಯಶ್ವಸಿಯಾಗಿದ್ದಾರೆ. ಮಡಿಕೇರಿ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ ತೆರಳಿದ್ದ ಡಾ. ಪಿಆರ್ ಎಸ್ ಚೇತನ್ ಅವರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಅಜ್ಜಿ ಜೀವ ರಕ್ಷಣೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv