ಕೊಪ್ಪಳ: ಮೂರು ದಿನ ನಡೆಯುವ ದಕ್ಷಿಣ ಭಾರತದ ಕುಂಭ ಮೇಳ ಎಂದು ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಕೆನಡಾ ಮೂಲದ ಮ್ಯಾಥ್ಯೂ ಫೌರ್ಟಿಯರ್ ದಂಪತಿ ಧ್ವಜಾರೋಹಣ ಮಾಡುವ ಮೂಲಕ ಈ ಬಾರಿಯ ಜಾತ್ರೆಗೆ ಚಾಲನೆ ನೀಡಿದ್ದಾರೆ. ಮ್ಯಾಥ್ಯೂ ಫೌರ್ಟಿಯರ್ ದಂಪತಿ ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಧಾರವಾಡ ಜಿಲ್ಲೆಯ ಕಲ್ಕೇರಿ ಗ್ರಾಮದಲ್ಲಿ ಸಂಗೀತ ಶಾಲೆ ಆರಂಭಿಸಿ, ಬಡ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ರಥೋತ್ಸವದ ಪೂರ್ವದಲ್ಲಿ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಥೋತ್ಸವದ ಪೂರ್ವದಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಸಿದ್ದಗಂಗಾ ಶ್ರೀಗಳ ಕುರಿತು ಮಾತನಾಡಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತರು ಮೌನಾಚರಣೆ ಮಾಡುವ ಮೂಲಕ ಸಿದ್ದಗಂಗಾ ಶ್ರೀಗಳಿಗೆ ಗೌರವ ಸೂಚಿಸಿದರು.
ನಾಡಿನ ಹಲವು ಜನಪ್ರತಿನಿಧಿಗಳು, ಸಾಧಕರು ಪಾಲ್ಗೊಳ್ಳುವ ಮೂಲಕ ಜಾತ್ರೆಗೆ ವಿಶೇಷ ಮೆರಗು ತಂದರು. ಈ ವೇಳೆ ಜಾತ್ರೆಯಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಸಾಧನೆಗೈದ ಕ್ಯಾಪ್ಟನ್ ಗೋಪಿನಾಥನ್ ಪಾಲ್ಗೊಂಡಿದ್ದರು. ಮಂಗಳವಾರ ಗವಿಸಿದ್ದೇಶ್ವರ ಜಾತ್ರೆಗೆ ಚಾಲನೆ ದೊರಕಿದ್ದು, ಮೂರು ದಿನಗಳ ಕಾಲ ಶ್ರೀಮಠದ ಆವರಣದಲ್ಲಿ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಜೊತೆಗೆ ಸಮಾಜಮುಖಿ ಚಿಂತನೆಗಳ ಚಿತ್ತಾರ ಅನಾವರಣಗೊಳ್ಳಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv