ಮಡಿಕೇರಿ: ಆರೆಂಜ್ ಅಲರ್ಟ್ ಘೋಷಣೆಯಾದ ಬಳಿಕ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ.
ಗುರುವಾರದಿಂದ ಸೋಮವಾರದವರೆಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಂತೆ ಗುರುವಾರದಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಳೆದ 48 ಗಂಟೆಗಳಿಂದ ಸೂರ್ಯನ ದರ್ಶನ ಇಲ್ಲವಾಗಿದ್ದು, ಮೋಡ ಕವಿದ, ಮಂಜು ಮುಸುಕಿದ ವಾತಾವರಣ ಜಿಲ್ಲೆಯಲ್ಲಿ ಕಂಡುಬಂದಿದೆ.
ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ಹಾಗೂ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿದೆ. ಜಿಲ್ಲೆಯ ನದಿ ತೊರೆ, ಹಳ್ಳ – ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ.
ಆರೆಂಜ್ ಅಲರ್ಟ್ ಹುಸಿಯಾಗದಂತೆ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೀಗೆ ಮಳೆ ಮುಂದುವರಿದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಆಗುತ್ತಾ ಎಂದು ಕೊಡಗಿನ ಜನ ಆತಂಕಗೊಂಡಿದ್ದಾರೆ.