ಕಲಬುರುಗಿ: ಬಿಸಿಲ ನಾಡು ಕಲಬುರಗಿ ಸೇರಿದಂತೆ ಹೈದರಬಾದ್ ಕರ್ನಾಟಕ ಪ್ರದೇಶದ ಜನರಿಗೆ ಪ್ರಕೃತಿ ಸೌಂದರ್ಯದ ತಾಣಗಳಿಗೆ ಹೋಗಲು ಸೂಕ್ತ ರೈಲು ಸಂಪರ್ಕವಿಲ್ಲದೇ ಸಮಸ್ಯೆ ಎದುರಿಸಿದ್ದ ಜನರಿಗೆ ಕೇಂದ್ರ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ.
ಕೇಂದ್ರ ಸರ್ಕಾರ ಸದ್ಯ ಕಲಬುರಗಿಯಿಂದ ಹಾಸನ ಮಾರ್ಗದ ರೈಲಿಗೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಕಲಬುರಗಿಯ ಪ್ರವಾಸಿಗರಿಗೆ ಸಖತ್ ಖುಷಿ ತಂದಿದೆ. ಸಾಮಾನ್ಯವಾಗಿ ಹೈದ್ರಾಬಾದ್ ಕರ್ನಾಟಕದ ಜನ ಹಾಸನ-ಚಿಕ್ಕಮಂಗಳೂರು ಜಿಲ್ಲೆಗಳ ಪ್ರವಾಸಿ ತಾಣ ಹೋಗಲು ಕನಿಷ್ಠ ಎರಡು ದಿನ ಬೇಕಾಗುತ್ತಿತ್ತು. ಹೀಗಾಗಿ ವಾರಗಟ್ಟಲೆ ಪ್ರವಾಸ ಪ್ಲಾನ್ ಮಾಡಿದವರು ಮಾತ್ರ ಆ ಭಾಗಕ್ಕೆ ಹೋಗುತ್ತಿದ್ದರು. ಆದರೆ ಇದೀಗ ಬೆಂಗಳೂರವರೆಗೆ ಸೀಮಿತವಾಗಿದ್ದ (ನಿತ್ಯ ಸಂಚರಿಸುವ) ಸೋಲಾಪುರ-ಯಶವಂತಪುರ ರೈಲನ್ನು ಹಾಸನದವರಗೆ ವಿಸ್ತರಿಸಿದ್ದಾರೆ.
ಕಲಬುರಗಿಯಿಂದ ಪ್ರತಿನಿತ್ಯ ರಾತ್ರಿ 9 ಗಂಟೆಗೆ ಹೊರಡುವ ಸೋಲಾಪುರ-ಯಶವಂತಪುರ ರೈಲು ಬೆಳಗ್ಗೆ 10.30ಕ್ಕೆ ಹಾಸನಕ್ಕೆ ತಲುಪುತ್ತದೆ. ಅಲ್ಲಿಂದ 2 ದಿನ ಪ್ರವಾಸಕ್ಕೆ ಹೋಗುವವರು 1 ದಿನ ಹಾಸನ ಮತ್ತೊಂದು ದಿನ ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಈ ಮೂಲಕ ವಾರಂತ್ಯದ ಪ್ರವಾಸಕ್ಕೆ ಹೋಗುವ ಕಲಬುರಗಿಯ ಜನರಿಗೆ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ಜಿಲ್ಲೆಯ ರೈಲ್ವೆ ಟಿಕೆಟ್ ಖೋಟಾಕ್ಕೆ ಮಾತ್ರ ಕಡಿತ ಮಾಡಬಾರದು ಎಂಬುದು ಪ್ರಜ್ಞಾವಂತರ ಆತಂಕವಾಗಿದೆ.