ಚಿಕ್ಕೋಡಿ: ಬಿಗ್ ಬಾಸ್ ಸೀಸನ್ 11ರ (Bigg Boss Kannada 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ದಿಢೀರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ವಿಚಾರದಿಂದ ಹಬ್ಬಿದ್ದ ವದಂತಿಗಳಿಗೆ ತೆರೆಬಿದ್ದಿದೆ.
ಬೆಳಗಾವಿಯ ಅಥಣಿ ತಾಲೂಕಿನ ಪಾರ್ಥನಹಳ್ಳಿಯ ನಿವಾಸಿ ಗೋಲ್ಡ್ ಸುರೇಶ್ ಬಿಗ್ ಬಾಸ್ನಲ್ಲಿ ಅತ್ಯಂತ ಪ್ರಬಲ ಸ್ಪರ್ಧಿಯಾಗಿದ್ದರು. ಈ ವಾರ ಕ್ಯಾಪ್ಟನ್ ಸಹ ಆಗಿದ್ದರು. ಆದರೆ ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದಿದ್ದಾರೆ. ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಗೋಲ್ಡ್ ಸುರೇಶ್ ಹೆಚ್ಚು ತಡ ಮಾಡದೇ ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಹೊರಗೆ ಬನ್ನಿ ಎಂದು ಬಿಗ್ ಬಾಸ್ ಆದೇಶಿಸಿತ್ತು.
ಈ ವಿಚಾರ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಗೋಲ್ಡ್ ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಲಾಗಿತ್ತು. ಈ ಬಗ್ಗೆ ಸುರೇಶ್ ತಂದೆ ಶಿವಗೌಡ ಪ್ರತಿಕ್ರಿಯೆ ನೀಡಿದ್ದು, ನನ್ನ ಕಾಲಿಗೆ ನೋವಾಗಿದೆ. ನಾನು ಸತ್ತಿಲ್ಲ, ಆ ರೀತಿ ವದಂತಿ ಹಬ್ಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಬಿಗ್ ಬಾಸ್ನಲ್ಲಿ ನನ್ನ ಮಗ ಒಳ್ಳೆಯ ಆಟ ಆಡುತ್ತಿದ್ದಾನೆ. ಉತ್ತರ ಕರ್ನಾಟಕದ ಹೆಸರು ಗಳಿಸುತ್ತಾನೆ ಎಂದಿದ್ದಾರೆ.
ಒಟ್ಟಿನಲ್ಲಿ ಸುಳ್ಳು ವದಂತಿಯಿಂದ ಸುರೇಶ್ ಬಿಗ್ ಬಾಸ್ನಿಂದ ಹೊರಗಡೆ ಬಂದಿದ್ದಾರೆ. ಅವರಿಗೆ ಬಿಗ್ ಬಾಸ್ ಮತ್ತೊಂದು ಕೊನೆಯ ಅವಕಾಶ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.