ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯ ಅಕ್ಕಿಆಲೂರು ಗ್ರಾಮದಿಂದ ಹಾನಗಲ್ ಪಟ್ಟಣದವರೆಗೆ ಹೋರಿಗಳ ಜೊತೆಗೆ ಪಾದಯಾತ್ರೆ ಮಾಡಲಾಗಿದೆ.
ಪ್ರತಿವರ್ಷ ದೀಪಾವಳಿ ಹಬ್ಬದ ನಂತರ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಕೊಬ್ಬರಿ, ಬಲೂನ್, ಜೂಲಾ ಹಾಕಿ ಭರ್ಜರಿ ಅಲಂಕಾರ ಮಾಡಿದ್ದ ಹೋರಿಗಳನ್ನು ಅಖಾಡದಲ್ಲಿ ಓಡಿಸಿ ರೈತರು ಹೋರಿ ಹಬ್ಬದ ಸಂಭ್ರಮ ಆಚರಿಸುತ್ತಿದರು. ಆದರೆ ಕಳೆದೊಂದು ತಿಂಗಳ ಹಿಂದೆ ಹಾವೇರಿ ತಾಲೂಕಿನ ಬಸಾಪುರದಲ್ಲಿ ನಡೆದ ಹೋರಿ ಹಬ್ಬದಲ್ಲಿ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಈ ಘಟನೆಯ ಬಳಿಕ ಜಿಲ್ಲಾಡಳಿತ ಹೋರಿ ಬೆದರಿಸುವ ಹಬ್ಬಕ್ಕೆ ನಿರ್ಬಂಧ ಹೇರಿದೆ. ಹೋರಿ ಹಬ್ಬಗಳನ್ನು ನಡೆಸದಂತೆ ತಾಕೀತು ಮಾಡಿದೆ. ಈ ವಿಷಯ ಹೋರಿ ಹಬ್ಬದ ಅಭಿಮಾನಿಗಳು ಮತ್ತು ಹೋರಿ ಮಾಲೀಕರನ್ನು ಕೆರಳಿಸಿದೆ. ಹೀಗಾಗಿ ಹೋರಿ ಹಬ್ಬಕ್ಕೆ ಅನುಮತಿ ನೀಡುವಂತೆ ಅಕ್ಕಿಆಲೂರು ಗ್ರಾಮದಿಂದ ಹಾನಗಲ್ ಪಟ್ಟಣದವರೆಗೆ ಸುಮಾರು ಹತ್ತು ಕಿಮೀ ವರೆಗೆ ವಿರಕ್ತ ಮಠದ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಿ ಹಬ್ಬದ ಅಭಿಮಾನಿಗಳು ಪಾದಯಾತ್ರೆ ನಡೆಸಿದರು. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ
ಈ ಸಂದರ್ಭದಲ್ಲಿ ಅಕ್ಕಿಆಲೂರಿನ ವಿರಕ್ತ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ರೈತರಿಗೆ ಖುಷಿ ಕೊಡುವ ಹೋರಿ ಹಬ್ಬಕ್ಕೆ ಅನುಮತಿ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಬಂದಿರುವ ಜಾನಪದ ಹಬ್ಬವನ್ನು ಉಳಿಸಬೇಕು. ಜಿಲ್ಲಾಡಳಿತ ಹೋರಿ ಹಬ್ಬಕ್ಕೆ ಅನುಮತಿ ನೀಡಿ ರೈತರ ಸಂತಸ, ಸಂಭ್ರಮಕ್ಕೆ ಕಾರಣವಾಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್ಡಿಕೆ
ಹಾನಗಲ್ ತಹಸೀಲ್ದಾರರ ಕಚೇರಿಗೆ ಕೊಬ್ಬರಿ ಹೋರಿಯ ಸಮೇತ ಹೋಗಿ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಕೆಲವು ನಿಯಮ ಹಾಗೂ ನಿರ್ಬಂಧಗಳನ್ನು ಹಾಕಿ ಹೋರಿ ಹಬ್ಬಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.