ಮಂಗಳೂರು: 2016ರಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರಿಗೆ ನಿಂದಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈಗೆ ಸುಳ್ಯ ನ್ಯಾಯಾಲಯ ನೀಡಿದ 2 ವರ್ಷ ಜೈ ಶಿಕ್ಷೆಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ತಡೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ 5ರಂದು ಡಿ.ಕೆ ಶಿವಕುಮಾರ್ ಸುಳ್ಯಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ಕೆಲದಿನಗಳ ಹಿಂದೆ ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ. ರವರು ಆರೋಪಿ ಗಿರಿಧರ್ ರೈಗೆ 2 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದರು. ಇದನ್ನೂ ಓದಿ: 2016ರಲ್ಲಿ ಡಿಕೆಶಿ ನಿಂದಿಸಿದ್ದ ಬೆಳ್ಳಾರೆಯ ಗಿರಿಧರ ರೈಗೆ 2 ವರ್ಷ ಜೈಲು
ಈ ತೀರ್ಪಿನ ವಿರುದ್ಧ ಗಿರಿಧರ್ ರೈ ಪುತ್ತೂರಿನ 5ನೇ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಗಿರಿಧರ್ ರೈ ಪರ ವಕೀಲರು ಜನಪ್ರತಿನಿಧಿಗಳ ಬಳಿ ಗ್ರಾಹಕರು ಪ್ರಶ್ನೆ ಮಾಡುವುದು ಅಪರಾಧವಲ್ಲ ಎಂಬ ಅಂಶವನ್ನು ನ್ಯಾಯಾಲಯದ ಮುಂದಿಟ್ಟು ತೀರ್ಪಿಗೆ ತಡೆ ನೀಡುವಂತೆ ಕೋರಿದರು. ಆ ಬಳಿಕ ಕೋರ್ಟ್ ಜೈಲು ಶಿಕ್ಷೆಗೆ ತಡೆ ನೀಡಿದೆ. ಇದನ್ನೂ ಓದಿ: ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ: ಡಿಕೆಶಿ
ಏನಿದು ಪ್ರಕರಣ:
2016ರಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ನಡೆದಿದ್ದ ಪ್ರಕರಣ ಇದಾಗಿದ್ದು, ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈ 2016ರ ಫೆಬ್ರವರಿ 28ರಂದು ಡಿ.ಕೆ.ಶಿವಕುಮಾರ್ಗೆ ಕರೆ ಮಾಡಿದ್ದರು. ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದ್ದ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಡಿಕೆಶಿಗೆ ಗಿರಿಧರ್ ರೈ ಅವಾಚ್ಯ ಶಬ್ದಗಳಿಂದ ಬೈದಿದ್ದರೂ ಎಂದು ಆರೋಪಿಸಿ ಅಂದೇ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಗಿರಿಧರ್ ವಿರುದ್ಧ ಡಿ.ಕೆ.ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಸುಳ್ಯ ನ್ಯಾಯಾಲಯ ಗಿರಿಧರ್ಗೆ ನಾಲ್ಕು ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ರೂ. ದಂಡ ತಪ್ಪಿದ್ದಲ್ಲಿ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿತ್ತು. 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೇ ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು.