ಮೈಸೂರು: ನಗರದ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಮೂವರು ಹೊಸ ಅತಿಥಿಗಳ ಆಗಮನವಾಗಿದೆ. ಈ ಹೊಸ ಅತಿಥಿಗಳು ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದ್ದು, ಆ ಅತಿಥಿಗಳ ಆಗಮನ ಅಲ್ಲಿನ ಸಿಬ್ಬಂದಿಗಳಿಗೂ ಖುಷಿ ತಂದಿದೆ.
ಮೃಗಾಲಯದಲ್ಲರುವ ಖುಷಿ ಜಿರಾಫೆ ಹಾಗೂ ನೀರು ಕುದುರೆ ಮರಿಗಳಿಗೆ ಜನ್ಮ ನೀಡಿದ್ದು, ಈಗ ಎಲ್ಲಾ ಪ್ರವಾಸಿಗರ ಆಕರ್ಷಣೆ ಆಗಿದೆ. ಆದರೆ ನೀರು ಕುದುರೆ ಮರಿ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಕಾರಣ ಆ ಮರಿಗಳು ತಿಂಗಳುಗಟ್ಟಲೆ ನೀರಿನಲ್ಲೇ ಇರುವುದರಿಂದ ಈ ಕುರಿತು ಮಾಹಿತಿ ಸಂಗ್ರಹಣೆ ಕಷ್ಟವಾಗಲಿದೆ.
ಇವೆರಡೂ ಮರಿಗಳ ಜನನದ ಜೊತೆಗೆ ಮೃಗಾಲಯಕ್ಕೆ ಮತ್ತೆರಡು ವಿಶೇಷ ಅತಿಥಿಗಳು ಆಗಮಿಸಿದ್ದು ತಿಂಗಳ ಹಿಂದೆ ಮೃಗಾಲಯ ಸೇರಿಕೊಂಡಿದ್ದ ಶ್ರೀಲಂಕಾದ ಹಸಿರು ಅನಾಕೊಂಡಗಳು ಇಂದಿನಿಂದ ಸಾರ್ವಜನಿಕರ ವಿಕ್ಷಣೆಗೆ ಲಭ್ಯವಾಗಿವೆ.
ದೇಶದ ಎರಡೇ ಎರಡು ಮೃಗಾಲಯದಲ್ಲಿ ಈ ಹಸಿರು ಅನಾಕೊಂಡಗಳು ಕಾಣಸಿಗುತ್ತದೆ. ಅದರಲ್ಲಿ ಮೈಸೂರು ಮೃಗಾಲಯ ಕೂಡ ಒಂದು. ಶ್ರೀಲಂಕಾದಿಂದ ಕಳೆದ ತಿಂಗಳು ಆಮದು ಮಾಡಿಕೊಂಡಿರುವ ಅನಾಕೊಂಡ ಹಾವುಗಳನ್ನ ಒಂದು ತಿಂಗಳ ಕಾಲ ಅದರ ಚಲನವಲನಗಳ ಮೇಲೆ ಗಮನ ಹರಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲ ಎಂದು ದೃಢವಾದ ಬಳಿಕ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿದೆ. ಈಗ ಸದ್ಯ ಈ ಹಸಿರು ಅನಾಕೊಂಡಗಳು ಆರೋಗ್ಯವಾಗಿದ್ದು ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿವೆ.