ಬೆಂಗಳೂರು: ರಾಮನಗರಕ್ಕೆ ಗಿಫ್ಟ್ ಕೊಡಲು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಿಕೆಶಿ ಒಂದು ವಾರದಲ್ಲೇ ಸಿಎಂ ಅವರನ್ನು ಓವರ್ ಟೇಕ್ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಕುಮಾರಸ್ವಾಮಿ ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ವಿಜ್ಞಾನ ವಿವಿನಾ ರಾಮನಗರಕ್ಕೆ ಶಿಫ್ಟ್ ಮಾಡ್ತೀನಿ ಅಂತ ಹೇಳಿದ್ದರು. ಆದರೆ ಅದಕ್ಕೆ ಬಿಜೆಪಿ ಅಡ್ಡಗಾಲು ಹಾಕಿತ್ತು. ಅಲ್ಲದೇ ಆಗ ಕುಮಾರಸ್ವಾಮಿ ಸುಮ್ಮನಾಗಿದ್ದರು.
ಶಿವಕುಮಾರ್ ಕುಮಾರಸ್ವಾಮಿಯ ಭರವಸೆಯನ್ನು ಎನ್ ಕ್ಯಾಶ್ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಳಾಂತರ ಮಾಡುವುದಕ್ಕೆ ಪ್ರಯತ್ನ ಮಾಡಿದ್ದರು. ಇದು ಕುಮಾರಸ್ವಾಮಿ ಹಾಗೂ ಡಿಕೆಶಿ ಕಲಹಕ್ಕೂ ಕಾರಣವಾಗಿತ್ತು. ಡಿಕೆಶಿ ಬಗ್ಗದೆ ರಾಮನಗರದಲ್ಲಿ ಭೂಮಿ ಮಂಜೂರು ಮಾಡಿದ್ದರು. ಆದರೆ ರೈತರಿಂದ ಒತ್ತಾಯ ಪೂರ್ವಕವಾಗಿ ಒಂದಿಷ್ಟು ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ ಅಂತ ಕೋರ್ಟ್ ಸ್ಥಳಾಂತರಕ್ಕೆ ತಡೆ ಕೊಟ್ಟಿದೆ.
ಕೋರ್ಟ್ ನಲ್ಲಿ ವ್ಯಾಜ್ಯ ಇರುವಾಗಲೇ ಮತ್ತೆ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಿಕೆಶಿ ಅಧಿಕಾರಿಗಳ ಸಭೆ ಕರೆದು, ಸದ್ಯದಲ್ಲೇ ವಿವಿ ರಾಮನಗರಕ್ಕೆ ಸ್ಥಳಾಂತರ ಮಾಡಬೇಕು ಅಂತಾ ಸೂಚ್ಯವಾಗಿ ತಿಳಿಸಿದ್ದಾರೆ. ಕೋರ್ಟ್ ತಡೆಯ ಬಗ್ಗೆ ಅಧಿಕಾರಿಗಳ ಮನವೊಲಿಕೆಗೆ ಬಗ್ಗದ ಸಚಿವರು, ಅದೆಲ್ಲ ನಾನು ನೋಡಿಕೊಳ್ಳುತ್ತೇನೆ. ಮಂಜೂರು ಮಾಡಿರುವ ಎಲ್ಲ ಭೂಮಿ ಬಗ್ಗೆ ಕೋರ್ಟ್ನಲ್ಲಿ ತಡೆ ಇಲ್ಲ, ಸ್ವಲ್ಪ ಭೂಮಿ ಬಗ್ಗೆ ಅಷ್ಟೇ ವಿವಾದ ಇದೆ. ನೀವು ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
ಅಷ್ಟೇ ಅಲ್ಲದೇ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರಭಾರ ವಿಸಿ ರಮೇಶ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲು ಡಿಕೆಶಿ ಆದೇಶ ಕೊಟ್ಟಿದ್ದು, ಕುಮಾರಸ್ವಾಮಿಯವರನ್ನು ಒವರ್ ಟೇಕ್ ಮಾಡಿ ಸ್ಥಳಾಂತರಕ್ಕೆ ರೆಡಿಯಾಗಿ ರಾಮನಗರಕ್ಕೆ ಗಿಫ್ಟ್ ಕೊಟ್ಟು ಕ್ರೆಡಿಟ್ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ ಎನ್ನಲಾಗಿದೆ.