ಮುಂಬೈ: ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ (Gautam Gambhir) ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕಷ್ಟದ ಸಮಯದಲ್ಲೂ ತನ್ನೊಟ್ಟಿಗೆ ನಿಂತು ಧೈರ್ಯ ತುಂಬಿದ್ದ ಇಬ್ಬರು ವ್ಯಕ್ತಿಗಳಿಗೆ ಟಿ20 ವಿಶ್ವಕಪ್ (T20 World Cup) ಗೆಲುವನ್ನು ಅರ್ಪಿಸಿದ್ದಾರೆ.
ಸೋಷಿಯಲ್ ಮೀಡಿಯಾ ಜನರಿಗೆ ನಾನು ಜವಾಬ್ದಾರನಲ್ಲ. ಡ್ರೆಸ್ಸಿಂಗ್ ರೂಮ್ನಲ್ಲಿರುವ ಆ 30 ಜನರಿಗೆ ಮಾತ್ರ ನಾನು ಜವಾಬ್ದಾರ. ಒಬ್ಬ ತರಬೇತುದಾರ ತನ್ನ ತಂಡದಷ್ಟೇ ಒಳ್ಳೆಯವನು. ಆಟಗಾರರು ನನ್ನನ್ನು ತರಬೇತುದಾರರನ್ನಾಗಿ ಮಾಡಿದ್ದಾರೆಂದು ಟೀಕಾಕಾರರಿಗೆ ಗಂಭೀರ್ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಸಿಕ್ಸರ್ನಲ್ಲಿ ಶತಕ ಹೊಡೆದು ವಿಶ್ವದಾಖಲೆ – ಯಾರು ಎಷ್ಟು ಸಿಕ್ಸ್?

ಟಿ20 ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನ ಪ್ರಸ್ತುತ ಮುಖ್ಯಸ್ಥ ಲಕ್ಷ್ಮಣ್ ಅವರನ್ನು ಗಂಭೀರ್ ನೆನಪಿಸಿಕೊಂಡಿದ್ದಾರೆ. ನಾನು ಈ ಟ್ರೋಫಿಯನ್ನು ರಾಹುಲ್ ದ್ರಾವಿಡ್ (Rahul Dravid) ಮತ್ತು ವಿವಿಎಸ್ ಲಕ್ಷ್ಮಣ್ (Laxman) ಅವರಿಗೆ ಅರ್ಪಿಸುತ್ತೇನೆ. ಭಾರತೀಯ ತಂಡವನ್ನು ಒಂದು ಸ್ಥಾನದಲ್ಲಿ ಇರಿಸಿದ್ದಕ್ಕಾಗಿ ರಾಹುಲ್ ಭಾಯ್ ಮತ್ತು ಸಿಒಇಯಲ್ಲಿ ಪೈಪ್ಲೈನ್ ರಚಿಸಿದ ಲಕ್ಷ್ಮಣ್ ಅವರಿಗೆ ಕೃತಜ್ಞತೆಗಳು. ಇವರಿಬ್ಬರೂ ನನ್ನ ಕಷ್ಟದ ಜೊತೆಗೆ ನಿಂತರು ಎಂದು ತಿಳಿಸಿದ್ದಾರೆ.
ನಾವು ಸೋಲುವ ಭಯವನ್ನು ಬಿಡಬೇಕು. ಸಂಪ್ರದಾಯವಾದಿ ಕ್ರಿಕೆಟ್ ಆಡುವ ಬದಲು, 120 ಕ್ಕೆ ಔಟಾಗುವುದು ಸರಿ. ಸೆಮಿಸ್ ಮತ್ತು ಫೈನಲ್ಗಳಲ್ಲಿ 250 ರನ್ ಗಳಿಸುವುದು ಧೈರ್ಯದ ವಿಶಿಷ್ಟ ಲಕ್ಷಣವಾಗಿದೆ ಎಂದು ತಂಡದ ಆಟಗಾರರ ಬಗ್ಗೆ ಗಂಭೀರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವವನ್ನೂ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 27 ಕೋಟಿ ನಗದು ಬಹುಮಾನ – ಯಾವ ತಂಡಕ್ಕೆ ಎಷ್ಟು ಕೋಟಿ?
ಸೂರ್ಯ ನನ್ನ ಕೆಲಸವನ್ನು ಸುಲಭಗೊಳಿಸಿದರು. ಅವರು ಉತ್ತಮ ನಾಯಕರಾಗಿದ್ದಾರೆ. ಮೈಲಿಗಲ್ಲುಗಳಲ್ಲ, ಟ್ರೋಫಿಗಳ ಗೆಲುವು ಸಂಭ್ರಮಿಸುವುದು ದೊಡ್ಡ ಉದ್ದೇಶವಾಗಬೇಕು. ಹಲವು ವರ್ಷಗಳಿಂದ ನಾವು ಮೈಲಿಗಲ್ಲುಗಳನ್ನು ಆಚರಿಸುತ್ತಿದ್ದೇವೆ. ವೈಯಕ್ತಿಕ ಮೈಲಿಗಲ್ಲುಗಳನ್ನು ಆಚರಿಸುವುದನ್ನು ನಿಲ್ಲಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ತಂಡದ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
2026ರ ಟಿ20 ವಿಶ್ವಕಪ್ (T20 World Cup) ಅನ್ನು ಟೀಂ ಇಂಡಿಯಾ (Team India) ಎತ್ತಿ ಹಿಡಿದಿದೆ. ಆರಂಭದಲ್ಲಿ ಬ್ಯಾಟರ್ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್ಗಳ ಬೆಂಕಿ ಬೌಲಿಂಗ್ನಿಂದ ಫೈನಲ್ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ನ್ಯೂಜಿಲೆಂಡ್ ವಿರುದ್ಧ 96 ರನ್ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

