ಕಲಬುರಗಿ: ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂಗೆ ಕನ್ನ ಹಾಕಿ 14 ಲಕ್ಷ ರೂ. ಹಣ ದೋಚಿ ದುಬೈಗೆ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ (25) ಬಂಧಿತ ಆರೋಪಿ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಬಳಿಯಿರುವ ಇಂಡಿಯಾ ಒನ್ ಎಟಿಎಂ ನಲ್ಲಿ ಜೂನ್ 06 ರಂದು ಶಿವಕುಮಾರ್, ಜಗದೇವಪ್ಪ (23) ಹಾಗೂ ಜಗನ್ನಾಥ್ (26) ಸೇರಿ ಎಟಿಎಂ ಪಾಸ್ ವರ್ಡ್ ಬಳಸಿ ಕಳ್ಳತನ ಮಾಡಿದ್ದರು. ಬಳಿಕ ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದ.
ಎಟಿಎಂ ಕಳ್ಳತನ ಕುರಿತು ಮಾಹಿತಿ ಪಡೆದ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಎಟಿಎಂ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ದೃಶ್ಯಗಳಲ್ಲಿ ಎಟಿಎಂನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಸಿಸಿಟಿವಿಗೆ ಛತ್ರಿ ಅಡ್ಡ ಹಿಡಿದು ಕೃತ್ಯ ಎಸಗಿದ್ದರು.
ಆರೋಪಿಗಳು ಸಿಕ್ಕಿ ಬಿದಿದ್ದು ಹೇಗೆ:
ಎಟಿಎಂ ನಲ್ಲಿ ಕಳ್ಳತನ ನಡೆದ ಬಳಿಕ ಎಟಿಎಂ ಗನ್ಮ್ಯಾನ್ ಆಗಿದ್ದ ಬಂಧಿತ ಜಗದೇವಪ್ಪ 10 ದಿನಗಳ ಕಾಲ ನಾಪತ್ತೆಯಾಗಿದ್ದ. ಅಲ್ಲದೇ ಕಳ್ಳತನ ಎಸಗಿದ್ದ ಆರೋಪಿಗಳು ಎಟಿಎಂ ಪಿನ್ ಕೋಡ್ ಬಳಸಿ ಕಳ್ಳತನ ಮಾಡಿದ್ದರು. ಈ ಮಾಹಿತಿಯನ್ನ ಪಡೆದ ಪೊಲೀಸರು ಜಗದೇವಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಜಗನ್ನಾಥನನ್ನು ಬಂಧಿಸಿದ್ದು, ಬಂಧಿತರಿಂದ 10.20 ಲಕ್ಷ ರೂ. ನಗದು, ಬೈಕ್, ಮೊಬೈಲ್, 12 ಎಟಿಎಂ ಪಾಸ್ ವರ್ಡ್ ವಶಕ್ಕೆ ಪಡೆದಿದ್ದರು.
ಅಲ್ಲದೇ ಬಂಧಿತರನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ ವೇಳೆ ಆರೋಪಿಗಳು ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದರ ಕುರಿತು ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳಿಂದ ಪಡೆದ ಮಾಹಿತಿ ಅನ್ವಯ ಪೊಲೀಸರು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಇಂದು ಮುಂಜಾನೆ ವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ ದುಬೈನಿಂದ ವಾಪಸ್ ಕರೆತಂದಿದ್ದಾರೆ.